ಹೆಸರು ಕೂಡ ತಿಳಿಯಲಿಲ್ಲ




ಹೆಸರು ಕೂಡ ತಿಳಿಯಲಿಲ್ಲ
ಅವನ ಒಲಿದೆನೋ
ಯಾವ ನೆಲೆಯೋ ಯಾವ ಕುಲವೋ
ಒಂದು ತಿಳಿಯೆನು.

ಕಂಡೊಡನೆ ಸೋತೆ ನಾನು ಏನೂ ನೋಡದೆ
ಮಾಯದಿರುಳ ಮರುಳಿನಲ್ಲಿ ಮನವ ನೀಡಿದೆ
ನಿನ್ನ ವಿನಾ ಬಾಳೆನು ನಾ ಎಂದು ನುಡಿವೆನು
ಮೊರೆವ ತೊರೆವ ಸೆಳವಿನಲ್ಲಿ ಕೈಯ ಹಿಡಿದೆನು
ಕೈಯ ಹಿಡಿದೆನು.

ತುಟಿಯ ಬಿಸಿ ಹಾಗೆ ಇದೆ ತುಸು ಆರದೇ
ಎದೆಯೊಳೆನೋ ಉರಿಯುತಿದೆ ಹೊರಗೆ ತೋರದೆ
ಪ್ರೇಮ ಪತ್ರ ಬರೆದು ಬರೆದು ಕಳಿಸಿ ಪ್ರಿಯನಿಗೆ
ಕಾಯುತಿರುವೆ ಉತ್ತರ ವಿಳಾಸ ಬರೆಯದೆ
ವಿಳಾಸ ಬರೆಯದೆ ವಿಳಾಸ ಬರೆಯದೆ.
 
                -  ಎಚ್. ಎಸ್. ವೆಂಕಟೇಶಮೂರ್ತಿ

ಏಳಿರೈ ಬಾಲರೇ!





ಏಳಿರೈ! ಬಾಲರೇ! ದೇಶಸೇವೆಗೈಯುವ!
ಕೇಳಿರೈ! ಕೇಳಿರೈ! ತಾಯ ಗೋಳ ರೋದನ!
ಪರಕೀಯರ ಪದತಳದೊಳು
ಹೊರಳಾಡುತ ಅಳುತಿರುವಳು!
ಕಂಡು ನೀವು ಸಹಿಪರೇ?
ಗಂಡುಗಲಿಗಳಲ್ಲವೇ?
ಅರೆಹರಿದಿಹ ಪರವಸನವ
ಧರಿಸುತ ತಾ ಮೊರೆಯಿಡುವಳು!
ಅಮ್ಮನಿರುವ ಗತಿಯನು
ನೋಡಿ ಸುಮ್ಮನಿರುವರೇ?
ಧೂಳಾಗಿದೆ ಜನನಿಯ ಮುಖ
ಹಾಳಾಗಿದೆ ಜನನಿಯ ಸುಖ!
ಏಳಿ! ಏಕೆ ಜಡತನ?
ಏಳಿ! ಸಾಕು ಬಡತನ!
ವೀರಶಿವನ ಮರೆತಿರುವಿರ?
ಧೀರತನವ ತೊರೆದಿರುವಿರ?
ಏಳಿ, ಅಮೃತ ಪುತ್ರರೆ !
ಏಳಿ, ಆನಂದಾತ್ಮರೆ !

                   - ಕುವೆಂಪು ('ಮೇಘಪುರ' ಕವನಸಂಕಲನದಿಂದ)

ಪ್ರೇಮದ ಗುಟ್ಟು

ಚಿತ್ರ ಕೃಪೆ: ಮಂಜುನಾಥ್ ಎ ಎನ್


ಆಡಿ ತೋರಬಾರದು ಪ್ರೀತೀನ
ತೋರದಂತೆ ಅದು ಇರೋದು
ತಂಗಾಳಿ ಹಾಗೆ

ನಾನು ಹೃದಯ ತೋಡಿಕೊಂಡೆ
ಹಲವು ಮಾತಲ್ಲಿ
ಅವಳು ದಿಗಿಲುಗೊಂಡು
ಕಾಣೆಯಾದಳು

ಅವಳನ್ನ ಒಬ್ಬ ಚುರುಕು ಕಣ್ಣಿನ ದಾರಿಹೋಕ ಕಂಡು
ಬಾಯಿ ಕಟ್ಟಿದಂತಾಗಿ
ನಿಡಿಸುಯ್ದ
ಪಡೆದ.
              - ಯು ಆರ್ ಅನಂತಮೂರ್ತಿ

(ವಿಲಿಯಂ ಬ್ಲೇಕ್‌ನ `Love’s Secret’ ಕವಿತೆಯ ಅನುವಾದ)

ಮೂಲ ಕವಿತೆ:
Never seek to tell thy love,
Love that never told can be;
For the gentle wind doth move
Silently, invisibly.

I told my love, I told my love,
I told her all my heart,
Trembling, cold, in ghastly fears.
Ah! she did depart!

Soon after she was gone from me,
A traveller came by,
Silently, invisibly:
He took her with a sigh. 


        - William Blake

ಅಮ್ಮ ನೆನೆಯುತ್ತೇನೆ

ಚಿತ್ರ ಕೃಪೆ: ಮಂಜುನಾಥ್ ಎ ಎನ್

ನಿನ್ನ ಹರಿದ ಸೀರೆಗಳಿಂದ ಹೊಲೆದ ಮೆತ್ತಗಿನ ಕೌದಿಯಲ್ಲಿ ಅಡಗಿ
ಹೂಂಗುಡುತ್ತ ಆಲಿಸಿದ
ಆಗದ ಹೋಗದ ಅದ್ಭುತ ಕತೆಗಳನ್ನು
ಮೊಲೆ ಬಿಡದ ಈ ಚೊಚ್ಚಲುಮಗನ ಚಪಲಕ್ಕೆ ಬೀಗುತ್ತ
ನಿನ್ನ ಪಿಸುಗುಡುವ ಗುಟ್ಟುಗಳ ಸಖಿಯರ ಜೊತೆ
ಸೆರಗು ಮುಚ್ಚಿದ ಬಾಯಲ್ಲಿ ಜಂಬ ಕೊಚ್ಚುವ
ನಿನ್ನ ಸೇಳೆ ಸಡಗರವನ್ನು

ಬುಗುರಿಯಾಡುವ ವಯಸ್ಸಿನಲ್ಲು ಸೆರಗಿಗಂಟಿದ ನಾನು
ಸಖಿಯರ ಜೊತೆಗಿನ ನಿನ್ನ ಪಿತೂರಿಗಳಿಂದ ರೇಗಿದ್ದನ್ನು
ನಿನ್ನ ಸಖಿಯರು ನೆಟ್ಟಿಗೆ ಮುರಿದು ನನ್ನ ದೃಷ್ಟಿತೆಗೆದಿದ್ದನ್ನು
ನನ್ನ ಪೇಚಿಗೆ ನೀನು ಹಿಗ್ಗಿದ್ದನ್ನು
ಅಮ್ಮ ನೆನೆಯುತ್ತೇನೆ

ನನ್ನ ಕೂರಿಸಿಕೊಂಡು ದೋಸೆ ರುಬ್ಬುವುದನ್ನು
ರೊಟ್ಟಿಗೆ ಹಿಟ್ಟು ಕಲೆಸುವುದನ್ನು
ಮನೆ ತೊಳೆದು ಸಾರಿಸಿ ರಂಗೋಲೆಯಿಕ್ಕುವುದನ್ನು
ಊದುಗೊಳವೆಯಿಂದ ಊದಿ ಊದಿ ಹಸಿ ಕಟ್ಟಿಗೆಯಲ್ಲು ಬೆಂಕಿ ಹತ್ತಿಸಿ

ಧಗ ಧಗ ಉರಿಸುವುದನ್ನು
ಅಪ್ಪನ ಕಣ್ಣಿಗೆ ಸುಖವಾಗುವಂತೆ ಕಟ್ಟುವ ನಿನ್ನ ತುರುಬನ್ನು
ಅದರ ಬೆಳ್ಳಿ ತಿರುಪನ್ನು
ಕೊಂಚ ಓರೆ ಬೈತಲೆಯ ನಿನ್ನ ಮೋಜನ್ನು
ಆ ಕಾಲದ ಕುಪ್ಪಸದ ಭುಜಕೀರ್ತಿ ಪುಕ್ಕಗಳನ್ನು
ಹಬ್ಬದ ದಿನ ನೀ ತೊಡುವ ಬುಗುಡಿಯನ್ನು

ಮೀಸೆ ಮೂಡುವ ಮುನ್ನವೇ ಪಕ್ಕದ ಮನೆಯ ಜಾಂಬವಿ ಜೊತೆ
ನನ್ನ ಚೆಲ್ಲಾಟ ಗಮನಿಸಿ ಅವಳನ್ನು ದೂರವಿಟ್ಟ ನಿನ್ನ ಕುಟಿಲೋಪಾಯಗಳನ್ನು
ಅಪ್ಪನನ್ನು ಹದ್ದಿನಲ್ಲಿಟ್ಟ ನಿನ್ನ ತಂತ್ರಗಳನ್ನು
ನಿನ್ನ ಕೈರುಚಿಯನ್ನು
ಧಾರಾಳವನ್ನು

ನನ್ನ ಹಡೆದ ಗಂಡುಬೀರಿ ತುಂಟಿ
ಇರುತ್ತಲೇ ಇರುತ್ತ
ಅದೊಂದು ದಿನ ಸುಮ್ಮನೇ ಹೊರಟುಹೋದದ್ದನ್ನು

ಮಕ್ಕಳಿಟ್ಟ ಬೆಂಕಿಗೆ ಉರಿದು ಬೂದಿಯಾಗಿ
ಪಂಚಭೂತಗಳಲ್ಲಿ ಒಂದಾದ ನೀನು

ಹರಡಿದ ಮರಳಿನ ಮೇಲೆ ನನ್ನ ತೋರು ಬೆರಳನ್ನು ಆಡಿಸಿ ತಿದ್ದಿಸಿದ
ಅಕ್ಷರಗಳನ್ನು
ಇಗೋ
ಬರೆಯುತ್ತ ಇರುವ ಈ ನಾನು

ಅದೊಂದು ದ್ವಾದಶಿಯ ಬೆಳಗಿನ ಝಾವ
ಈಜಾಡಿಸಿಕೊಂಡ ತಂಪಿನ ತುಂಗೆಯನ್ನೂ
ಆತುರದಲ್ಲಿ ಕೈಮುಗಿಸಿಕೊಂಡ ದಡದ ಶಿವನನ್ನೂ
ಸಿಡಿಮಿಡಿಯುತ್ತ ಒಲ್ಲದೆ ಉರಿಯುವ ಬೆಂಕಿಗೆ ಕಾಯುವ
ತವರಿನಿಂದ ತಂದ ಕಾವಲಿ ಮೇಲೆ
ತೂತು ತೂತಾದ ಹದವಾಗಿ ಗರಿ ಗರಿಯಾದ
ತೆಳ್ಳನೆಯ
ಬಿಸಿಬಿಸಿ ದೋಸೆ ಹೊಯ್ದು, ಮಡಿಸಿ, ತುಪ್ಪ ಸವರಿ
ಚಿಗುರು ಬಾಳೆಯ ಮೇಲೆ ಬಡಿಸಿದ
ನಿನ್ನ ಕೈಕುಶಲವೇ ಆದ ವಾತ್ಸಲ್ಯವನ್ನು
ನೆನೆಯುತ್ತೇನೆ.

              -  ಯು ಆರ್ ಅನಂತಮೂರ್ತಿ

ಕರುಣಾಳು ಬಾ ಬೆಳಕೆ

Light and darkness Photography by Leszek Bujnowski


ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳನೊಡನೆಯೆ ಸಾಕು ನನಗೊಂದು
ಹೆಜ್ಜೆಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

         - ಬಿ.ಎಂ. ಶ್ರೀಕಂಠಯ್ಯ
('ಇಂಗ್ಲೀಷ್ ಗೀತೆಗಳು' ಕವನ ಸಂಕಲನದಿಂದ)

ನಿನ್ನ ಪ್ರೇಮದ ಪರಿಯ

ಚಿತ್ರ ಕೃಪೆ: http://files.myopera.com/heisenberg16/albums/8923052/light-and-shadow.jpg
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ.

ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ.

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನಪುರಿಗೆ.

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ -
ಯೊಳಗುಡಿಯ ಮೂರ್ತಿಮಹಿಮೆ.

ನಿನ್ನ ಪ್ರೇಮದ ಪರಿಯ ನಾನರಿಯೆ, ಕನಕಾಂಗಿ
ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ?

                    - ಕೆ. ಎಸ್. ನರಸಿಂಹಸ್ವಾಮಿ
           ('ಮೈಸೂರು ಮಲ್ಲಿಗೆ' ಕವನ ಸಂಕಲನದಿಂದ)

ಕನ್ನಡ ಪದಗೊಳು

ಚಿತ್ರ ಕೃಪೆ: www.flickr.com
ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!'
ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'
ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!

'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!