ಕಾರ್ತೀಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಾರ್ತೀಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕವಿತೆಗೆ

ಚಿತ್ರ ಕೃಪೆ: http://userserve-ak.last.fm
ಇಲ್ಲ, ಇನ್ನು ಬರೆಯಲಾರೆ
        ತೆರೆಯಲಾರೆ ಹೃದಯವ,
ನಿನ್ನ ನಿರೀಕ್ಷಣೆಯೋಳಿನ್ನು
        ತಳ್ಳಲಾರೆ ದಿವಸವ.

ಇಲ್ಲ, ಇನ್ನು ಹಿಡಿಯಲಾರೆ
         ಆ ಮಿಂಚಿನ ಚಾಣವ
ಇನ್ನು ನಾನು ಹೂಡಲಾರೆ
         ಹೆದೆಯೇರಿಸಿ ಬಾಣವ.

ಮತ್ತೆ ಎತ್ತಿ ನಿಲಿಸಲಾರೆ
         ಮುರಿದು ಬಿದ್ದ ಗುಡಿಗಳ
ಸುತ್ತ ಬಿದ್ದ ಬೂದಿಯೊಳಗೆ
         ಹುಡುಕಲಾರೆ ಕಿಡಿಗಳ.

ಬೇಡ ಬೇಡ ಬೇಡ ನನಗೆ
        ನಿನ್ನ ಕೃಪೆಯ ಸಂಕೋಲೆ,
ಇನ್ನೇತಕೆ ನಿನ್ನ ಹಂಗು
        ಕಾವ್ಯಸ್ಫೂರ್ತಿ ಚಂಚಲೆ.

                            - ಜಿ. ಎಸ್. ಶಿವರುದ್ರಪ್ಪ
                    ( 'ಕಾರ್ತೀಕ' ಕವನಸಂಕಲನದಿಂದ)

ಶಕ್ತಿಯ ಕೊಡು


ಶಕ್ತಿಯ ಕೊಡು, ಶಕ್ತಿಯ ಕೊಡು,
ಶಕ್ತಿಯ ಕೊಡು ಹೇ ಪ್ರಭೂ.
ಸತ್ಯಕಾಗಿ ನಿಲುವ ಛಲವ
ದೀಪ್ತಗೊಳಿಸು ನನ್ನೊಳು.

ಎಡರ ಕಡಲ ತೆರೆ ಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಬಲವ ನೀಡು ಶ್ರೀ ಗುರೂ.

ನೂರುಲ್ಕೆಯ ರಭಸ ಮತಿಯ
ಅಬ್ಬರಗಳ ನಡುವೆಯೂ
ನಿಯತ ಗತಿಯ ತಾರಗೆಯೊಲು
ನೇರವಿರಿಸು ನನ್ನನು.

ಗುಡುಗು ಸಿಡಿಲ್ ಮಿಂಚಿನಾಚೆ
ಅಚಂಚಲದ ನೀಲಿಗೆ
ಸದಾ ತುಡಿವ ಗರುಡಗತಿಯ
ತುಂಬು ನನ್ನ ಹೃದಯಕೆ.

             -  ಜಿ ಎಸ್ ಶಿವರುದ್ರಪ್ಪ
  ('ಕಾರ್ತೀಕ' ಕವನ ಸಂಕಲನದಿಂದ)

ಕವಿ - ವೇದಾಂತಿ


ವೇದಾಂತಿ ಹೇಳಿದನು:
     ಹೊನ್ನೆಲ್ಲ ಮಣ್ಣು;
ಕವಿಯೊಬ್ಬ ಹಾಡಿದನು:
     ಮಣ್ಣೆಲ್ಲ ಹೊನ್ನು!

ವೇದಾಂತಿ ಹೇಳಿದನು:
     ಈ ಹೆಣ್ಣು ಮಾಯೆ;
ಕವಿಯು ಕನವರಿಸಿದನು:
     ಓ ಇವಳೇ ಚೆಲುವೆ
ಇವಳ ಜೊತೆಯಲಿ ನಾನು
     ಸ್ವರ್ಗವನೆ ಗೆಲುವೆ!
   
ವೇದಾಂತಿ ಹೇಳಿದನು:
     ಈ ಬದುಕು ಶೂನ್ಯ;
ಕವಿ ನಿಂತು ಸಾರಿದನು:
     ಇದು ಅಲ್ಲ ಅನ್ಯ,
ಜನ್ಮ ಜನ್ಮದಿ ಸವಿದೆ
     ನಾನೆಷ್ಟು ಧನ್ಯ!

                 -  ಜಿ ಎಸ್ ಶಿವರುದ್ರಪ್ಪ
         ('ಕಾರ್ತೀಕ' ಕವನ ಸಂಕಲನದಿಂದ)