ಬಿ ಆರ್ ಲಕ್ಷ್ಮಣರಾವ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಿ ಆರ್ ಲಕ್ಷ್ಮಣರಾವ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮರವಾಗು



ಮರವಾಗೆಲೆ, ಓ ಜೀವವೇ, ಮರವಾಗು
ಹಲ ಬಗೆಯಲಿ ಈ ಲೋಕಕೆ ನೆರವಾಗು
ಅಲೆದಾಡುವ ಜೀವಕ್ಕೆಲ್ಲಿ ಯಾವ ನೆಲೆ?
ನೆಲದಾಳಕೆ ಬೇರನೂರಿ ಸ್ಥಿರವಾಗು

ಭೂಸಾರವ ನೀ ಹೀರಿ ತೊಡು ಹಸಿರನ್ನು
ಪರಿಸರಕೆ ನೀಡು ನಿರ್ಮಲ ಉಸಿರನ್ನು
ರೆಂಬೆಯಲ್ಲೂ ತುಂಬಲಿ ಹೂ ಹಣ್ಣು
ತಂಪು ನೆರಳ ಕೊಡುವ ಚಪ್ಪರವಾಗು

ಹಲವು ಜೀವಗಳಿಗೆ ಆಗು ನೀನು ನೆಲೆ
ಕಾರ್ಮುಗಿಲನು ಇಳೆಗೆ ಸೆಳೆದು ಸುರಿದು ಮಳೆ
ಪ್ರತಿ ಚೈತ್ರ ನಿನಗೆ ತರಲಿ ಹೊಸ ಜೀವಕಳೆ
ಹಡೆದ ನೆಲತಾಯಿಗೆ ನೀ ವರವಾಗು.

                            - ಬಿ ಆರ್ ಲಕ್ಷ್ಮಣರಾವ್

ಅಮ್ಮ, ನಿನ್ನ ಎದೆಯಾಳದಲ್ಲಿ

ಚಿತ್ರ ಕೃಪೆ: Shutterstock.com
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಅಗಾಧ ಗಗನ

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ,
ಮೂರ್ತ ಪ್ರೇಮದೆಡೆಗೆ

            - ಬಿ ಆರ್ ಲಕ್ಷ್ಮಣರಾವ್