ನೆನಪುಗಳೆ ಹಾಗೆ

   
     ನೆನಪುಗಳೆ ಹಾಗೆ;
ಮಳೆಗಾಲದಲ್ಲಿ ನೆಲದೊಳಕ್ಕಿಳಿದ ನೀರಿನ ತುಳುಕು,
ಬೇಸಿಗೆಗೆ ಬಾನೆಲ್ಲ ನೀರ ನೆಳಲು;
ಕಾಯುವ ನೆಲಕ್ಕಿಳಿವ ಸರಿಯ ಬಿಳಲು;
ಸುಟ್ಟು ಹಿಡಿಬೂದಿಯಾದಪ್ಪ ಮರಳುತ್ತಾನೆ
ನಾಳ ನಾಳಗಳಲ್ಲಿ ತೀರ್ಥರೂಪ;
ಮೂಲಾಧಾರದಿಂದಾಜ್ಞೆವರೆಗೆ ಚಕ್ರಚ್ಯವನ;
ಯಾತ್ರೆ ಹೋಗದೆ ಬೇರೆ ದಾರಿ ಇಲ್ಲ;
ಮಾರುತಲೆ ಗುರುತಿಸದ ತಲೆಮಾರುಗಳ ಅಲೆಮಾರಿ;
ಬರಿಯ ಮೂಲಾಧಾರ, ಬಡ್ಡಿ ಶುನ್ಯ.
    ನಿದ್ದೆಯೆಳೆಯನ್ನು ಛೇದಿಸುವ ವಾಸ್ತವದರಚು,
ಹೊದಿಕೆಯೆಲ್ಲಾ ಬೆವರು, ಕುನ್ನಿ - ಕಿರಚು;
ಕನಸಲ್ಲಿ ಕಿಟಕಿಕದ ತೆರೆದು ತೊಳೆಯುವ ಎರಚು;
ಅಲ್ಲಿ ಗಾಳಿಗೆ ಮಾನವ ಚಾಚು -
ಮರವೆ ಎಂಬುದೆ ಇಲ್ಲ, ಮರವೆ ಎಲ್ಲ.
    ಕರುಳು ಕಿವುಚಿದ ಹಾಗೆ ಒಂದೊಂದು ಸಲ:
ಅಮ್ಮನೆದೆಯಿಂದೆತ್ತಿ ಗುಮ್ಮ ಪಾತಾಳಕ್ಕೆ
ಎತ್ತಿ ಕುಕ್ಕಿದ ಹಾಗೆ;
ಸರಭರದ ಮಳೆ ಹೊರಗೆ; ಚಳಿಯ ನೆಗಸಿನ ಮೇಲೆ
ಪಾತಿ ನನ್ನದು ಪುಟ್ಟಿ ಹಾಸು; ತಿರುಗಣಿ ಮಡುವಿನಲ್ಲಿ
ಗಿರಕಿ, ಕುಗ್ಗುತಿರಲು ಚಕ್ರಪರಿಧಿ.
ಕಣ್ಣಿಗೆ ಕಣ್ಣು ತಾಗಿ ತಾಗದೆ, ಒಳಗೆ ತಣ್ಣನೆಯ ಕೈ
ಅಮುಕುವೆದೆ; ಹೊರಗಡೆಗೆ
ತಣ್ಣ  ತಣ್ಣನೆ ಗಾಳಿ, ಕುಣಿಕೆಯೆಸೆವ ಕರಾಳ
ಕತ್ತ ಬಿಗಿಯುತ್ತಲಿರೆ, ನಾಲಗೆಯನೆಬ್ಬಿಸದ
ತಡಕೊಳ್ಳಲಾರದೊಳ ಕಿರಿಚು - ನಿಶ್ಯಬ್ದ.
     ಬಹಳ ವರ್ಷದ ಹಿಂದೆ ಮೊಗೇರಿಯಲ್ಲಿ
ಬೇರು ನೆಟ್ಟಿರುವ ನನ್ನೂರಿನಲ್ಲಿ;
ಹೊದಿಕೆಯೊಳಗಡೆ ಕುಗ್ಗಿ ಕುಗ್ಗಿ ಬೊಟ್ಟಾಗಿ ಮಿರುಗುವ ಹರಳು;
ಪರದೆ ಮೇಲಕ್ಕೆ ಸುರುಳಿ ಸುರುಳಿ ಬಿಚ್ಚಿ ಸಾಗುತ್ತಿರುವ
ಅನಂತ ಚಲನೆಯ ನಿರಂತರ ವಿಚಿತ್ರ.
    ಮಳೆ ಕಳೆದು ಬೆಸಲಾದ ಮೇಲೆ ಮತ್ತೂ ನೆನಪು;
ಸಹಸ್ರ ತೂತುಗಳಿಂದ ಸೂಕ್ಷ್ಮ ರೂಪ
ಹಬ್ಬಿ ಮಂದಯಿಸುವ ಮಹಾಬಿಲಕ್ಕೆ ಬೆಳ್ಳಿಯ ಪರದೆ,
ಏಳು ಬಣ್ಣಗಳ ನೋರೇಳು ಕ್ಷೇಪ.
ಆಸಾಡಿಗಾಳಿ ಕಾಯುತ್ತ ಕೂರುವ ಕೆಲಸ
ಕಾಡು ಕೆಂಪಾಗಿರುವ ರಂಧ್ರಗಳಿಗೆ;
ಬಿರುಗಾಳಿ ಮಳೆ ಗುಡುಗು ಸಿಡಿಲು ಕೋಲಾಹಲ,
ಧಾತುಧಾರೆಗೆ ಚಿಗಿವ ಜೀವಜಾಲ.
ಒಳಗಿಂದ ಹೊರಗೆ, ಹೊರಗಿಂದೊಳಗೆ, ಮೇಲಿಂದ
ಕೆಳಕ್ಕೆ, ಮೇಲಕ್ಕೆ ರಾಟಿ ಚಲನೆ;
ಚುಕ್ಕಾಣಿ ಹಿಡಿದಷ್ಟೆ ತೃಪ್ತಿ ಬುದ್ದಿಗೆ; ದಿಕ್ಕು
ದಾರಿ ನಡೆ ನಿರ್ಧಾರ ಅದರಾಚೆಗೆ.

               - ಗೋಪಾಲಕೃಷ್ಣ ಅಡಿಗ
('ವರ್ಧಮಾನ' ಕವನ ಸಂಕಲನದಿಂದ)

ಮಗು

ಚಿತ್ರ ಕೃಪೆ: http://pixdaus.com/single.php?id=19487 

ಪ್ರತಿಯೊಂದು ಮಗು ಕೂಡ ಬಾನಿಂದಲೇ ಕೆಳ
ಕ್ಕಿಳಿದು ಮಣ್ಣಿಗೆ ಬಿದ್ದ ಬೆಳಕಿನ ಮರಿ;
ಗರಿಸುಟ್ಟ ಗರುಡ ಬರುತ್ತಾನೆ ಆರಯ್ಕೆಗೆ
ನಮ್ಮ ನಿಮ್ಮವರಿವರ ಎಡೆಗೆ, ತೊಡೆಗೆ.

ತೊಳದಿಟ್ಟ ಮನದ ಮೇಲೇನ ಬರೆಯುತ್ತೀರಿ,
ಯಾವರ್ಥ, ಯಾವ ಪುರುಷಾರ್ಥ?
ಯಾವ ಮೇಲ್ಪಂಕ್ತಿ? ನೆಲ ಕಚ್ಚಿ ಬೇರ್ಪಟ್ಟು
ಅಂತರಿಕ್ಷಕ್ಕೇನೆ ತುಡಿವ ಪಂಥ?

ಅಥವಾ ಬಗ್ಗಿ ತಗ್ಗಿ ಮಣ್ಣುಣಿಯಾಗಿ, ಅರಗಿಣಿಯಾಗಿ
ಮಣ್ಣುಗೂಡುವ ವ್ಯರ್ಥ ಯಾತ್ರೆ?
ನಕ್ಷತ್ರವಾಗುವುದ ಮರೆತು ಉಲ್ಕಾಪಾತ
ವಾಗಿ ಕರಕುವ ಅರ್ಥವಿರದ ವಾರ್ತೆ?

ನಮ್ಮ ಬದುಕಿನ ಮುನ್ದಿನಧ್ಯಾಯವೇ ಮಗು.
ಅನನ್ತವೇದದನುಕ್ತ ಸೂಕ್ತ.
ಯಾವ ದೇವರ ಹಾರಿ, ಯಾವ ಶಕ್ತಿಗೆ ಹೋರಿ,
ತೆರೆಯುವುದು ಯಾವುದು ದಿಗಂತ?

ಪ್ರತಿಯೊಬ್ಬನೆದೆಯಲ್ಲು ಇರುತ್ತದೊಂದೊಂದು ಮಗು,
ಮಾಂಸದಲ್ಲಿಳಿದು ಕಲ್ಪನೆಗೆ ಬೆಳೆದು,
ಕನಸಿನಾಕಾಶದಾಕಾರಶತ ತಳೆಯುವುದು
ಅಮೃತಕಲಶವ ಹೊರುವ ಉಕ್ಕಿನ ಸತು.

           - ಗೋಪಾಲಕೃಷ್ಣ ಅಡಿಗ
('ಮೂಲಕ ಮಹಾಶಯರು' ಕವನ ಸಂಕಲನದಿಂದ)

ಅಂಥಿಂಥ ಹೆಣ್ಣು ನೀನಲ್ಲ;

ಚಿತ್ರ ಕೃಪೆ : www.tumblr.com

ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.

                  - ಕೆ. ಎಸ್. ನರಸಿಂಹಸ್ವಾಮಿ

ಕಣ್ಣೀರು

ಚಿತ್ರ ಕೃಪೆ http://www.fanpop.com
ಕಣ್ಣೀರು ಹನಿಯಲ್ಲಿ ಮೊಗದ ನಗೆಯನು ಕಂಡೆ
ಕಣ್ಣೀರ ಹನಿಯಲ್ಲಿ ಜಗದ ಹೃದಯವ ಕಂಡೆ
ಕಣ್ಣೀರಿನಲಿ ವಿವಿಧ ಅನುಭವದ ಸವಿಯುಂಡೆ
               ಕಣ್ಣೀರಿಗಿಂ ಮಿಗಿಲು ತತ್ವಬೋಧಕರಿಲ್ಲ
               ಮುನ್ನೀರು ಎಂಬುದೂ ಕಣ್ಣೀರೆ ಎಲ್ಲ !

ಕಣ್ಣೀರ ಹೊಳೆಯಲ್ಲಿ ರಾಜ್ಯಗಳು ಉದಿಸಿದುವು
ಕಣ್ಣೀರ ಹೊಳೆಯಲ್ಲಿ ಮಕುಟಗಳು ತೇಲಿದುವು
ಕಣ್ಣೀರಿನಲಿ ಕಾಲದೇಶಗಳು ಕರಗುವುವು
               ವಿಶ್ವದಲಿ ತೇಲುವೀ  ಬ್ರಹ್ಮಾಂಡಗಳು ಎಲ್ಲ
               ಕಣ್ಣೀರಿನುಂಡೆಗಳೋ, ಬಲ್ಲವನೆ  ಬಲ್ಲ !

                                                         - ಜಿ. ಎಸ್. ಶಿವರುದ್ರಪ್ಪ
                                               ( 'ಸಾಮಗಾನ' ಕವನ ಸಂಕಲನದಿಂದ )

ಕವಿತೆಗೆ

ಚಿತ್ರ ಕೃಪೆ: http://userserve-ak.last.fm
ಇಲ್ಲ, ಇನ್ನು ಬರೆಯಲಾರೆ
        ತೆರೆಯಲಾರೆ ಹೃದಯವ,
ನಿನ್ನ ನಿರೀಕ್ಷಣೆಯೋಳಿನ್ನು
        ತಳ್ಳಲಾರೆ ದಿವಸವ.

ಇಲ್ಲ, ಇನ್ನು ಹಿಡಿಯಲಾರೆ
         ಆ ಮಿಂಚಿನ ಚಾಣವ
ಇನ್ನು ನಾನು ಹೂಡಲಾರೆ
         ಹೆದೆಯೇರಿಸಿ ಬಾಣವ.

ಮತ್ತೆ ಎತ್ತಿ ನಿಲಿಸಲಾರೆ
         ಮುರಿದು ಬಿದ್ದ ಗುಡಿಗಳ
ಸುತ್ತ ಬಿದ್ದ ಬೂದಿಯೊಳಗೆ
         ಹುಡುಕಲಾರೆ ಕಿಡಿಗಳ.

ಬೇಡ ಬೇಡ ಬೇಡ ನನಗೆ
        ನಿನ್ನ ಕೃಪೆಯ ಸಂಕೋಲೆ,
ಇನ್ನೇತಕೆ ನಿನ್ನ ಹಂಗು
        ಕಾವ್ಯಸ್ಫೂರ್ತಿ ಚಂಚಲೆ.

                            - ಜಿ. ಎಸ್. ಶಿವರುದ್ರಪ್ಪ
                    ( 'ಕಾರ್ತೀಕ' ಕವನಸಂಕಲನದಿಂದ)

ನಿಂಬೆ ಗಿಡ

ಚಿತ್ರ ಕೃಪೆ: http://heatherbailey.typepad.com

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

                                - ಬಿ. ಆರ್. ಲಕ್ಷ್ಮಣರಾವ್

ಪೋರಿ ಪೋರ

ಚಿತ್ರ ಕೃಪೆ: weheartit.com
ಪೋರೀ ನೀನು, ನಾನು ಪೂರಾ
ಮಾರಿ ಕಣ್ಣಿಗೆ ಮರುಳರಾಗಿ
ನೆಚ್ಚಿ ಮೆಚ್ಚಿ ಕೂಡಿದ್ದೇವs
ಬೇರೆ ಇಲ್ಲಾ। ಇದ್ದಾರೆ ಶಿವನೆ ಬಲ್ಲಾ.

ಯಾಕ? ಏನು? ಎಲ್ಲಿಗಂತs
ನಾಕು ಮಾತು ಕೂಡಾ ನಾವು
ಒಬ್ಬರಿಗೊಬ್ಬರು ಆಗs
ಕೇಳಲಿಲ್ಲಾ। ಉತ್ತರಾ ಹೇಳಲಿಲ್ಲಾ

ಹೆಣ್ಣು ಮಣ್ಣು ಹಾsಳಂತs
ಬಣ್ಣ ಕಡೆಬಾಳದಂತs
ಬಾಳುವೀ ಸುಳ್ಳಾಟಂತs
ಹೆದರಲಿಲ್ಲಾ। ಯಾರೂ ಹೆದರಿಸಲಿಲ್ಲಾ

ಆಡಿದ್ದೊಂದs ನೋಡಿದ್ದೊಂದs
ಹೂಡಿದ್ದೊಂದs ಕೂಡಿದ್ದೊಂದs
ಬೇರೆ ಮಾತು ನನಗ ನಿನಗs
ಗೊತ್ತs ಇಲ್ಲಾ। ಗುಟ್ಟು ಶಿವನೆ ಬಲ್ಲಾ.

              - ದ ರಾ ಬೇಂದ್ರೆ
 ('ನಾದಲೀಲೆ' ಕವನ ಸಂಕಲನದಿಂದ)