ಹೆಸರು ಕೂಡ ತಿಳಿಯಲಿಲ್ಲ




ಹೆಸರು ಕೂಡ ತಿಳಿಯಲಿಲ್ಲ
ಅವನ ಒಲಿದೆನೋ
ಯಾವ ನೆಲೆಯೋ ಯಾವ ಕುಲವೋ
ಒಂದು ತಿಳಿಯೆನು.

ಕಂಡೊಡನೆ ಸೋತೆ ನಾನು ಏನೂ ನೋಡದೆ
ಮಾಯದಿರುಳ ಮರುಳಿನಲ್ಲಿ ಮನವ ನೀಡಿದೆ
ನಿನ್ನ ವಿನಾ ಬಾಳೆನು ನಾ ಎಂದು ನುಡಿವೆನು
ಮೊರೆವ ತೊರೆವ ಸೆಳವಿನಲ್ಲಿ ಕೈಯ ಹಿಡಿದೆನು
ಕೈಯ ಹಿಡಿದೆನು.

ತುಟಿಯ ಬಿಸಿ ಹಾಗೆ ಇದೆ ತುಸು ಆರದೇ
ಎದೆಯೊಳೆನೋ ಉರಿಯುತಿದೆ ಹೊರಗೆ ತೋರದೆ
ಪ್ರೇಮ ಪತ್ರ ಬರೆದು ಬರೆದು ಕಳಿಸಿ ಪ್ರಿಯನಿಗೆ
ಕಾಯುತಿರುವೆ ಉತ್ತರ ವಿಳಾಸ ಬರೆಯದೆ
ವಿಳಾಸ ಬರೆಯದೆ ವಿಳಾಸ ಬರೆಯದೆ.
 
                -  ಎಚ್. ಎಸ್. ವೆಂಕಟೇಶಮೂರ್ತಿ

ಏಳಿರೈ ಬಾಲರೇ!





ಏಳಿರೈ! ಬಾಲರೇ! ದೇಶಸೇವೆಗೈಯುವ!
ಕೇಳಿರೈ! ಕೇಳಿರೈ! ತಾಯ ಗೋಳ ರೋದನ!
ಪರಕೀಯರ ಪದತಳದೊಳು
ಹೊರಳಾಡುತ ಅಳುತಿರುವಳು!
ಕಂಡು ನೀವು ಸಹಿಪರೇ?
ಗಂಡುಗಲಿಗಳಲ್ಲವೇ?
ಅರೆಹರಿದಿಹ ಪರವಸನವ
ಧರಿಸುತ ತಾ ಮೊರೆಯಿಡುವಳು!
ಅಮ್ಮನಿರುವ ಗತಿಯನು
ನೋಡಿ ಸುಮ್ಮನಿರುವರೇ?
ಧೂಳಾಗಿದೆ ಜನನಿಯ ಮುಖ
ಹಾಳಾಗಿದೆ ಜನನಿಯ ಸುಖ!
ಏಳಿ! ಏಕೆ ಜಡತನ?
ಏಳಿ! ಸಾಕು ಬಡತನ!
ವೀರಶಿವನ ಮರೆತಿರುವಿರ?
ಧೀರತನವ ತೊರೆದಿರುವಿರ?
ಏಳಿ, ಅಮೃತ ಪುತ್ರರೆ !
ಏಳಿ, ಆನಂದಾತ್ಮರೆ !

                   - ಕುವೆಂಪು ('ಮೇಘಪುರ' ಕವನಸಂಕಲನದಿಂದ)

ಪ್ರೇಮದ ಗುಟ್ಟು

ಚಿತ್ರ ಕೃಪೆ: ಮಂಜುನಾಥ್ ಎ ಎನ್


ಆಡಿ ತೋರಬಾರದು ಪ್ರೀತೀನ
ತೋರದಂತೆ ಅದು ಇರೋದು
ತಂಗಾಳಿ ಹಾಗೆ

ನಾನು ಹೃದಯ ತೋಡಿಕೊಂಡೆ
ಹಲವು ಮಾತಲ್ಲಿ
ಅವಳು ದಿಗಿಲುಗೊಂಡು
ಕಾಣೆಯಾದಳು

ಅವಳನ್ನ ಒಬ್ಬ ಚುರುಕು ಕಣ್ಣಿನ ದಾರಿಹೋಕ ಕಂಡು
ಬಾಯಿ ಕಟ್ಟಿದಂತಾಗಿ
ನಿಡಿಸುಯ್ದ
ಪಡೆದ.
              - ಯು ಆರ್ ಅನಂತಮೂರ್ತಿ

(ವಿಲಿಯಂ ಬ್ಲೇಕ್‌ನ `Love’s Secret’ ಕವಿತೆಯ ಅನುವಾದ)

ಮೂಲ ಕವಿತೆ:
Never seek to tell thy love,
Love that never told can be;
For the gentle wind doth move
Silently, invisibly.

I told my love, I told my love,
I told her all my heart,
Trembling, cold, in ghastly fears.
Ah! she did depart!

Soon after she was gone from me,
A traveller came by,
Silently, invisibly:
He took her with a sigh. 


        - William Blake

ಅಮ್ಮ ನೆನೆಯುತ್ತೇನೆ

ಚಿತ್ರ ಕೃಪೆ: ಮಂಜುನಾಥ್ ಎ ಎನ್

ನಿನ್ನ ಹರಿದ ಸೀರೆಗಳಿಂದ ಹೊಲೆದ ಮೆತ್ತಗಿನ ಕೌದಿಯಲ್ಲಿ ಅಡಗಿ
ಹೂಂಗುಡುತ್ತ ಆಲಿಸಿದ
ಆಗದ ಹೋಗದ ಅದ್ಭುತ ಕತೆಗಳನ್ನು
ಮೊಲೆ ಬಿಡದ ಈ ಚೊಚ್ಚಲುಮಗನ ಚಪಲಕ್ಕೆ ಬೀಗುತ್ತ
ನಿನ್ನ ಪಿಸುಗುಡುವ ಗುಟ್ಟುಗಳ ಸಖಿಯರ ಜೊತೆ
ಸೆರಗು ಮುಚ್ಚಿದ ಬಾಯಲ್ಲಿ ಜಂಬ ಕೊಚ್ಚುವ
ನಿನ್ನ ಸೇಳೆ ಸಡಗರವನ್ನು

ಬುಗುರಿಯಾಡುವ ವಯಸ್ಸಿನಲ್ಲು ಸೆರಗಿಗಂಟಿದ ನಾನು
ಸಖಿಯರ ಜೊತೆಗಿನ ನಿನ್ನ ಪಿತೂರಿಗಳಿಂದ ರೇಗಿದ್ದನ್ನು
ನಿನ್ನ ಸಖಿಯರು ನೆಟ್ಟಿಗೆ ಮುರಿದು ನನ್ನ ದೃಷ್ಟಿತೆಗೆದಿದ್ದನ್ನು
ನನ್ನ ಪೇಚಿಗೆ ನೀನು ಹಿಗ್ಗಿದ್ದನ್ನು
ಅಮ್ಮ ನೆನೆಯುತ್ತೇನೆ

ನನ್ನ ಕೂರಿಸಿಕೊಂಡು ದೋಸೆ ರುಬ್ಬುವುದನ್ನು
ರೊಟ್ಟಿಗೆ ಹಿಟ್ಟು ಕಲೆಸುವುದನ್ನು
ಮನೆ ತೊಳೆದು ಸಾರಿಸಿ ರಂಗೋಲೆಯಿಕ್ಕುವುದನ್ನು
ಊದುಗೊಳವೆಯಿಂದ ಊದಿ ಊದಿ ಹಸಿ ಕಟ್ಟಿಗೆಯಲ್ಲು ಬೆಂಕಿ ಹತ್ತಿಸಿ

ಧಗ ಧಗ ಉರಿಸುವುದನ್ನು
ಅಪ್ಪನ ಕಣ್ಣಿಗೆ ಸುಖವಾಗುವಂತೆ ಕಟ್ಟುವ ನಿನ್ನ ತುರುಬನ್ನು
ಅದರ ಬೆಳ್ಳಿ ತಿರುಪನ್ನು
ಕೊಂಚ ಓರೆ ಬೈತಲೆಯ ನಿನ್ನ ಮೋಜನ್ನು
ಆ ಕಾಲದ ಕುಪ್ಪಸದ ಭುಜಕೀರ್ತಿ ಪುಕ್ಕಗಳನ್ನು
ಹಬ್ಬದ ದಿನ ನೀ ತೊಡುವ ಬುಗುಡಿಯನ್ನು

ಮೀಸೆ ಮೂಡುವ ಮುನ್ನವೇ ಪಕ್ಕದ ಮನೆಯ ಜಾಂಬವಿ ಜೊತೆ
ನನ್ನ ಚೆಲ್ಲಾಟ ಗಮನಿಸಿ ಅವಳನ್ನು ದೂರವಿಟ್ಟ ನಿನ್ನ ಕುಟಿಲೋಪಾಯಗಳನ್ನು
ಅಪ್ಪನನ್ನು ಹದ್ದಿನಲ್ಲಿಟ್ಟ ನಿನ್ನ ತಂತ್ರಗಳನ್ನು
ನಿನ್ನ ಕೈರುಚಿಯನ್ನು
ಧಾರಾಳವನ್ನು

ನನ್ನ ಹಡೆದ ಗಂಡುಬೀರಿ ತುಂಟಿ
ಇರುತ್ತಲೇ ಇರುತ್ತ
ಅದೊಂದು ದಿನ ಸುಮ್ಮನೇ ಹೊರಟುಹೋದದ್ದನ್ನು

ಮಕ್ಕಳಿಟ್ಟ ಬೆಂಕಿಗೆ ಉರಿದು ಬೂದಿಯಾಗಿ
ಪಂಚಭೂತಗಳಲ್ಲಿ ಒಂದಾದ ನೀನು

ಹರಡಿದ ಮರಳಿನ ಮೇಲೆ ನನ್ನ ತೋರು ಬೆರಳನ್ನು ಆಡಿಸಿ ತಿದ್ದಿಸಿದ
ಅಕ್ಷರಗಳನ್ನು
ಇಗೋ
ಬರೆಯುತ್ತ ಇರುವ ಈ ನಾನು

ಅದೊಂದು ದ್ವಾದಶಿಯ ಬೆಳಗಿನ ಝಾವ
ಈಜಾಡಿಸಿಕೊಂಡ ತಂಪಿನ ತುಂಗೆಯನ್ನೂ
ಆತುರದಲ್ಲಿ ಕೈಮುಗಿಸಿಕೊಂಡ ದಡದ ಶಿವನನ್ನೂ
ಸಿಡಿಮಿಡಿಯುತ್ತ ಒಲ್ಲದೆ ಉರಿಯುವ ಬೆಂಕಿಗೆ ಕಾಯುವ
ತವರಿನಿಂದ ತಂದ ಕಾವಲಿ ಮೇಲೆ
ತೂತು ತೂತಾದ ಹದವಾಗಿ ಗರಿ ಗರಿಯಾದ
ತೆಳ್ಳನೆಯ
ಬಿಸಿಬಿಸಿ ದೋಸೆ ಹೊಯ್ದು, ಮಡಿಸಿ, ತುಪ್ಪ ಸವರಿ
ಚಿಗುರು ಬಾಳೆಯ ಮೇಲೆ ಬಡಿಸಿದ
ನಿನ್ನ ಕೈಕುಶಲವೇ ಆದ ವಾತ್ಸಲ್ಯವನ್ನು
ನೆನೆಯುತ್ತೇನೆ.

              -  ಯು ಆರ್ ಅನಂತಮೂರ್ತಿ

ಕರುಣಾಳು ಬಾ ಬೆಳಕೆ

Light and darkness Photography by Leszek Bujnowski


ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳನೊಡನೆಯೆ ಸಾಕು ನನಗೊಂದು
ಹೆಜ್ಜೆಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

         - ಬಿ.ಎಂ. ಶ್ರೀಕಂಠಯ್ಯ
('ಇಂಗ್ಲೀಷ್ ಗೀತೆಗಳು' ಕವನ ಸಂಕಲನದಿಂದ)

ನಿನ್ನ ಪ್ರೇಮದ ಪರಿಯ

ಚಿತ್ರ ಕೃಪೆ: http://files.myopera.com/heisenberg16/albums/8923052/light-and-shadow.jpg
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು.

ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು.

ಸಾಗರನ ಹೃದಯದಲಿ ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ.

ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ.

ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನಪುರಿಗೆ.

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ -
ಯೊಳಗುಡಿಯ ಮೂರ್ತಿಮಹಿಮೆ.

ನಿನ್ನ ಪ್ರೇಮದ ಪರಿಯ ನಾನರಿಯೆ, ಕನಕಾಂಗಿ
ತಾರೆಯಾಗದೆ ಕಾಣುವೀ ಮಿಂಚು, ನಾಳೆ, ಅರ್ಧಾಂಗಿ?

                    - ಕೆ. ಎಸ್. ನರಸಿಂಹಸ್ವಾಮಿ
           ('ಮೈಸೂರು ಮಲ್ಲಿಗೆ' ಕವನ ಸಂಕಲನದಿಂದ)

ಕನ್ನಡ ಪದಗೊಳು

ಚಿತ್ರ ಕೃಪೆ: www.flickr.com
ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!'
ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'
ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!

'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!

ಬರಲಿ ಜಡದ ಬಡತನಕ್ಕೆ ಜೀವದೈಸಿರಿ!

ಚಿತ್ರ ಕೃಪೆ: http://www.brecorder.com

ಅಃ! ಮತ್ತದೊಮ್ಮೆ ಉಲಿ!
ಹಕ್ಕಿ, ಮತ್ತದೊಮ್ಮೆ ನಲಿ!
ಬತ್ತಿದೆದೆಗೆ ಬರಲಿ ನಿನ್ನ
ಗಾನದೊಳ್ಸರಿ!
ಬರಲಿ ಜಡದ ಬಡತನಕ್ಕೆ
ಜೀವದೈಸಿರಿ!
ರಸದ ಹನಿ
ನಿನ್ನ ದನಿ!
ಹಾಡು ಮತ್ತದೊಮ್ಮೆ, ಹಕ್ಕಿ!
ನಿನ್ನ ಪ್ರಾಣಲಹರಿಯುಕ್ಕಿ
ಜಗತ್ ಪ್ರಾಣನಾಡಿಯಲ್ಲಿ
ಹರುಷ ಹರಿಯಲಿ!
ಜಡದಪಾರ ಭಾರದಲ್ಲಿ
ಜೀವವುರಿಯಲಿ!
ಜಗನ್ನೇತ್ರ ಜೋಂಪಿಸುತಿದೆ
ಮೌನ ಭಾರದಿ!
ಚೈತನ್ಯವೆ ನಿದ್ರಿಸುತಿದೆ
ಜಡದ್ವಾರದಿ!
ಬಣ್ಣಗರಿ,
ವೀಣೆಮರಿ,
ಹಾಡು, ಹಕ್ಕಿ, ಮತ್ತದೊಮ್ಮೆ,
ಇಳಿಯುವಂತೆ ಜಡದ ಹೆಮ್ಮೆ!
ಅಃ! ಮತ್ತದೊಮ್ಮೆ ಉಲಿ!
ಹಕ್ಕಿ, ಮತ್ತದೊಮ್ಮೆ ನಲಿ!
ಬತ್ತಿದೆದೆಗೆ ಬರಲಿ ನಿನ್ನ
ಗಾನದೊಳ್ಸರಿ;
ಬರಲಿ ಜಡದ ಬಡತನಕ್ಕೆ
ಜೀವದೈಸಿರಿ!

          - ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)

ನನ್ನವಳು

ಚಿತ್ರ ಕೃಪೆ:www.flickr.com

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ।

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.

                   - ಕೆ. ಎಸ್. ನರಸಿಂಹ ಸ್ವಾಮಿ
  ('ಇರುವಂತಿಗೆ' ಕವನ ಸಂಕಲನದಿಂದ)

ರತ್ನನ್ ಪರ್ಪಂಚ!

ಚಿತ್ರ ಕೃಪೆ: www.oldindianphotos.in

ಯೆಳ್ಕೊಳ್ಳಾಕ್ ಒಂದ್ ಊರು
ತಲೆಮೇಗೆ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈಯಿಡದೊಳ್ ಪುಟ್ನಂಜಿ
ನಗನಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!

ಹಗಲೆಲ್ಲ ಬೆವರ್ ಅರ್ಸಿ
ತಂದಿದ್ರಲ್ ಒಸಿ ಮುರ್ಸಿ
ಸಂಜೇಲಿ ಉಳಿಯೆಂಡ ಕೊಂಚ
ಈರ್‍ತ ಮೈ ಝುಂ ಅಂದ್ರೆ
ವಾಸ್ನೆ ಘಂ ಘಂ ಅಂದ್ರೆ
ತುಂಭೋಯ್ತು ರತ್ನನ್ ಪರ್ಪಂಚ!

ಏನೋ ಕುಸಿಯಾದಾಗ
ಮತತ್  ಎಚ್ ಓದಾಗ
ಅಂಗೇನೆ ಪರಪಂಚದ್ ಅಂಚ
ದಾಟ್ಕಂಡಿ ಆರಾಡ್ತ
ಕನ್ನಡದಲ್ ಪದವಾಡ್ತ
ಹಿಗ್ಗೋದು ರತ್ನನ್ ಪರ್ಪಂಚ!

ದುಕ್ಕಿಲ್ಲದಾಲಿಲ್ಲ
ನಮಗ್ ಅದರಾಗ್ ಪಾಲಿಲ್ಲ
ನಾವ್ ಕಂಡಿಲ್ಲ್ ಆ ತಂಚ ವಂಚ;
ನಮ್ಮಸ್ಟಕ್ ನಾವಾಗಿ
ಇದ್ದಿದ್ರಲ್ಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ!

ಬಡತನ ಗಿಡತನ
ಏನಿದ್ರೇನು? ನಡತೇನ
ಚೆಂದಾಗ್ ಇಟ್ಕೊಳ್ಳಾದೆ ಅಚ್ಛ!
ಅಂದ್ಕೊಂಡಿ ಸುಕವಾಗಿ
ಕಸ್ಟಕ್ಕೆ  ನಗಮೊಕವಾಗಿ
ನಗಿಯೋದೆ ರತ್ನನ್ ಪರ್ಪಂಚ!

ದೇವರ್ ಏನ್ರ ಕೊಡಲಣ್ಣ
ಕೊಡದಿದ್ರೆ ಬುಡಲಣ್ಣ
ನಾವೆಲ್ಲ ಔನೀಗೆ ಬಚ್ಚ!
ಔನ್ ಆಕಿದ್ ತಾಳ್ದಂಗೆ
ಕಣ್ ಮುಚ್ಚ್ಕೊಂಡ್ ಯೋಳ್ದಂಗೆ
ಕುಣಿಯಾದೆ ರತ್ನನ್ ಪರ್ಪಂಚ!

                    - ಜಿ ಪಿ ರಾಜರತ್ನಂ 

ದೇಶಭಕ್ತನೊರ್ವನಿಗೆ


ಶ್ರೀಕೃಷ್ಣನೆಂದನಂದರ್ಜುನಗೆ “ಹೇ ಪಾರ್ಥ,
ಕೀಳಾದೊಡಂ ತನ್ನ ಧರ್ಮದೊಳಳಿವೆ ಲೇಸು;
ಮೇಲಾಗಿ ತೋರ್ದಡಂ ಪರಧರ್ಮವದು ಹೇಸು,
ಭೀಕರಮಜಯಕರಂ; ತನಗನರ್ಥಂ, ವ್ಯರ್ಥ
ಅನ್ಯರಿಗೆ.” ಕಬ್ಬಿಣದ ಕರ್ಮ ಕಬ್ಬಿಣಕೆ ಹಿತ.
ಗಣಿಯಿಂದಮಲ್ತು ಗುಣದಿಂದೆ ಲೋಹದ ಕರ್ಮ
ನಿರ್ಣಯಂ. ಗುಣವರಿತ ನಡೆಯೆ ಯೋಗದ ಮರ್ಮ.
ಹೊರಗೊಳಗನಾಳ್ವ ಆ ಕಟ್ಟಳೆಯೆ ದಿವ್ಯ ಋತ.
ದೇಶಭಕ್ತನೆ, ನಿನ್ನ ಕರ್ಮಕೆ ಸುಲಭ ಕೀರ್ತಿ
ದೊರೆಯುತಿದೆ; ಶೀಘ್ರ ಫಲವೂ ಲಭಿಸುತಿದೆ ಜನಕೆ;
ನೀನಿಂದು ಲೋಕದಾರಾಧನೆಯ ಶ್ರೀಮೂರ್ತಿ:
ಕರುಬು ನಾಣ್ಗಳ ಸೋಂಕು ಸುಳಿಯದೈ ಕವಿಮನಕೆ!
ಸೌಂದರ್ಯಸೃಷ್ಟಿಯೆ ಕವಿಗೆ ಪೂಜೆ, ಕರ್ತವ್ಯ,
ಜನಸೇವೆ, ಸಾಧನೆ: ರಸವೆ ಪರಮಗಂತವ್ಯ!

                             - ಕುವೆಂಪು

ನೆನಪುಗಳೆ ಹಾಗೆ

   
     ನೆನಪುಗಳೆ ಹಾಗೆ;
ಮಳೆಗಾಲದಲ್ಲಿ ನೆಲದೊಳಕ್ಕಿಳಿದ ನೀರಿನ ತುಳುಕು,
ಬೇಸಿಗೆಗೆ ಬಾನೆಲ್ಲ ನೀರ ನೆಳಲು;
ಕಾಯುವ ನೆಲಕ್ಕಿಳಿವ ಸರಿಯ ಬಿಳಲು;
ಸುಟ್ಟು ಹಿಡಿಬೂದಿಯಾದಪ್ಪ ಮರಳುತ್ತಾನೆ
ನಾಳ ನಾಳಗಳಲ್ಲಿ ತೀರ್ಥರೂಪ;
ಮೂಲಾಧಾರದಿಂದಾಜ್ಞೆವರೆಗೆ ಚಕ್ರಚ್ಯವನ;
ಯಾತ್ರೆ ಹೋಗದೆ ಬೇರೆ ದಾರಿ ಇಲ್ಲ;
ಮಾರುತಲೆ ಗುರುತಿಸದ ತಲೆಮಾರುಗಳ ಅಲೆಮಾರಿ;
ಬರಿಯ ಮೂಲಾಧಾರ, ಬಡ್ಡಿ ಶುನ್ಯ.
    ನಿದ್ದೆಯೆಳೆಯನ್ನು ಛೇದಿಸುವ ವಾಸ್ತವದರಚು,
ಹೊದಿಕೆಯೆಲ್ಲಾ ಬೆವರು, ಕುನ್ನಿ - ಕಿರಚು;
ಕನಸಲ್ಲಿ ಕಿಟಕಿಕದ ತೆರೆದು ತೊಳೆಯುವ ಎರಚು;
ಅಲ್ಲಿ ಗಾಳಿಗೆ ಮಾನವ ಚಾಚು -
ಮರವೆ ಎಂಬುದೆ ಇಲ್ಲ, ಮರವೆ ಎಲ್ಲ.
    ಕರುಳು ಕಿವುಚಿದ ಹಾಗೆ ಒಂದೊಂದು ಸಲ:
ಅಮ್ಮನೆದೆಯಿಂದೆತ್ತಿ ಗುಮ್ಮ ಪಾತಾಳಕ್ಕೆ
ಎತ್ತಿ ಕುಕ್ಕಿದ ಹಾಗೆ;
ಸರಭರದ ಮಳೆ ಹೊರಗೆ; ಚಳಿಯ ನೆಗಸಿನ ಮೇಲೆ
ಪಾತಿ ನನ್ನದು ಪುಟ್ಟಿ ಹಾಸು; ತಿರುಗಣಿ ಮಡುವಿನಲ್ಲಿ
ಗಿರಕಿ, ಕುಗ್ಗುತಿರಲು ಚಕ್ರಪರಿಧಿ.
ಕಣ್ಣಿಗೆ ಕಣ್ಣು ತಾಗಿ ತಾಗದೆ, ಒಳಗೆ ತಣ್ಣನೆಯ ಕೈ
ಅಮುಕುವೆದೆ; ಹೊರಗಡೆಗೆ
ತಣ್ಣ  ತಣ್ಣನೆ ಗಾಳಿ, ಕುಣಿಕೆಯೆಸೆವ ಕರಾಳ
ಕತ್ತ ಬಿಗಿಯುತ್ತಲಿರೆ, ನಾಲಗೆಯನೆಬ್ಬಿಸದ
ತಡಕೊಳ್ಳಲಾರದೊಳ ಕಿರಿಚು - ನಿಶ್ಯಬ್ದ.
     ಬಹಳ ವರ್ಷದ ಹಿಂದೆ ಮೊಗೇರಿಯಲ್ಲಿ
ಬೇರು ನೆಟ್ಟಿರುವ ನನ್ನೂರಿನಲ್ಲಿ;
ಹೊದಿಕೆಯೊಳಗಡೆ ಕುಗ್ಗಿ ಕುಗ್ಗಿ ಬೊಟ್ಟಾಗಿ ಮಿರುಗುವ ಹರಳು;
ಪರದೆ ಮೇಲಕ್ಕೆ ಸುರುಳಿ ಸುರುಳಿ ಬಿಚ್ಚಿ ಸಾಗುತ್ತಿರುವ
ಅನಂತ ಚಲನೆಯ ನಿರಂತರ ವಿಚಿತ್ರ.
    ಮಳೆ ಕಳೆದು ಬೆಸಲಾದ ಮೇಲೆ ಮತ್ತೂ ನೆನಪು;
ಸಹಸ್ರ ತೂತುಗಳಿಂದ ಸೂಕ್ಷ್ಮ ರೂಪ
ಹಬ್ಬಿ ಮಂದಯಿಸುವ ಮಹಾಬಿಲಕ್ಕೆ ಬೆಳ್ಳಿಯ ಪರದೆ,
ಏಳು ಬಣ್ಣಗಳ ನೋರೇಳು ಕ್ಷೇಪ.
ಆಸಾಡಿಗಾಳಿ ಕಾಯುತ್ತ ಕೂರುವ ಕೆಲಸ
ಕಾಡು ಕೆಂಪಾಗಿರುವ ರಂಧ್ರಗಳಿಗೆ;
ಬಿರುಗಾಳಿ ಮಳೆ ಗುಡುಗು ಸಿಡಿಲು ಕೋಲಾಹಲ,
ಧಾತುಧಾರೆಗೆ ಚಿಗಿವ ಜೀವಜಾಲ.
ಒಳಗಿಂದ ಹೊರಗೆ, ಹೊರಗಿಂದೊಳಗೆ, ಮೇಲಿಂದ
ಕೆಳಕ್ಕೆ, ಮೇಲಕ್ಕೆ ರಾಟಿ ಚಲನೆ;
ಚುಕ್ಕಾಣಿ ಹಿಡಿದಷ್ಟೆ ತೃಪ್ತಿ ಬುದ್ದಿಗೆ; ದಿಕ್ಕು
ದಾರಿ ನಡೆ ನಿರ್ಧಾರ ಅದರಾಚೆಗೆ.

               - ಗೋಪಾಲಕೃಷ್ಣ ಅಡಿಗ
('ವರ್ಧಮಾನ' ಕವನ ಸಂಕಲನದಿಂದ)

ಮಗು

ಚಿತ್ರ ಕೃಪೆ: http://pixdaus.com/single.php?id=19487 

ಪ್ರತಿಯೊಂದು ಮಗು ಕೂಡ ಬಾನಿಂದಲೇ ಕೆಳ
ಕ್ಕಿಳಿದು ಮಣ್ಣಿಗೆ ಬಿದ್ದ ಬೆಳಕಿನ ಮರಿ;
ಗರಿಸುಟ್ಟ ಗರುಡ ಬರುತ್ತಾನೆ ಆರಯ್ಕೆಗೆ
ನಮ್ಮ ನಿಮ್ಮವರಿವರ ಎಡೆಗೆ, ತೊಡೆಗೆ.

ತೊಳದಿಟ್ಟ ಮನದ ಮೇಲೇನ ಬರೆಯುತ್ತೀರಿ,
ಯಾವರ್ಥ, ಯಾವ ಪುರುಷಾರ್ಥ?
ಯಾವ ಮೇಲ್ಪಂಕ್ತಿ? ನೆಲ ಕಚ್ಚಿ ಬೇರ್ಪಟ್ಟು
ಅಂತರಿಕ್ಷಕ್ಕೇನೆ ತುಡಿವ ಪಂಥ?

ಅಥವಾ ಬಗ್ಗಿ ತಗ್ಗಿ ಮಣ್ಣುಣಿಯಾಗಿ, ಅರಗಿಣಿಯಾಗಿ
ಮಣ್ಣುಗೂಡುವ ವ್ಯರ್ಥ ಯಾತ್ರೆ?
ನಕ್ಷತ್ರವಾಗುವುದ ಮರೆತು ಉಲ್ಕಾಪಾತ
ವಾಗಿ ಕರಕುವ ಅರ್ಥವಿರದ ವಾರ್ತೆ?

ನಮ್ಮ ಬದುಕಿನ ಮುನ್ದಿನಧ್ಯಾಯವೇ ಮಗು.
ಅನನ್ತವೇದದನುಕ್ತ ಸೂಕ್ತ.
ಯಾವ ದೇವರ ಹಾರಿ, ಯಾವ ಶಕ್ತಿಗೆ ಹೋರಿ,
ತೆರೆಯುವುದು ಯಾವುದು ದಿಗಂತ?

ಪ್ರತಿಯೊಬ್ಬನೆದೆಯಲ್ಲು ಇರುತ್ತದೊಂದೊಂದು ಮಗು,
ಮಾಂಸದಲ್ಲಿಳಿದು ಕಲ್ಪನೆಗೆ ಬೆಳೆದು,
ಕನಸಿನಾಕಾಶದಾಕಾರಶತ ತಳೆಯುವುದು
ಅಮೃತಕಲಶವ ಹೊರುವ ಉಕ್ಕಿನ ಸತು.

           - ಗೋಪಾಲಕೃಷ್ಣ ಅಡಿಗ
('ಮೂಲಕ ಮಹಾಶಯರು' ಕವನ ಸಂಕಲನದಿಂದ)

ಅಂಥಿಂಥ ಹೆಣ್ಣು ನೀನಲ್ಲ;

ಚಿತ್ರ ಕೃಪೆ : www.tumblr.com

ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.

                  - ಕೆ. ಎಸ್. ನರಸಿಂಹಸ್ವಾಮಿ

ಕಣ್ಣೀರು

ಚಿತ್ರ ಕೃಪೆ http://www.fanpop.com
ಕಣ್ಣೀರು ಹನಿಯಲ್ಲಿ ಮೊಗದ ನಗೆಯನು ಕಂಡೆ
ಕಣ್ಣೀರ ಹನಿಯಲ್ಲಿ ಜಗದ ಹೃದಯವ ಕಂಡೆ
ಕಣ್ಣೀರಿನಲಿ ವಿವಿಧ ಅನುಭವದ ಸವಿಯುಂಡೆ
               ಕಣ್ಣೀರಿಗಿಂ ಮಿಗಿಲು ತತ್ವಬೋಧಕರಿಲ್ಲ
               ಮುನ್ನೀರು ಎಂಬುದೂ ಕಣ್ಣೀರೆ ಎಲ್ಲ !

ಕಣ್ಣೀರ ಹೊಳೆಯಲ್ಲಿ ರಾಜ್ಯಗಳು ಉದಿಸಿದುವು
ಕಣ್ಣೀರ ಹೊಳೆಯಲ್ಲಿ ಮಕುಟಗಳು ತೇಲಿದುವು
ಕಣ್ಣೀರಿನಲಿ ಕಾಲದೇಶಗಳು ಕರಗುವುವು
               ವಿಶ್ವದಲಿ ತೇಲುವೀ  ಬ್ರಹ್ಮಾಂಡಗಳು ಎಲ್ಲ
               ಕಣ್ಣೀರಿನುಂಡೆಗಳೋ, ಬಲ್ಲವನೆ  ಬಲ್ಲ !

                                                         - ಜಿ. ಎಸ್. ಶಿವರುದ್ರಪ್ಪ
                                               ( 'ಸಾಮಗಾನ' ಕವನ ಸಂಕಲನದಿಂದ )

ಕವಿತೆಗೆ

ಚಿತ್ರ ಕೃಪೆ: http://userserve-ak.last.fm
ಇಲ್ಲ, ಇನ್ನು ಬರೆಯಲಾರೆ
        ತೆರೆಯಲಾರೆ ಹೃದಯವ,
ನಿನ್ನ ನಿರೀಕ್ಷಣೆಯೋಳಿನ್ನು
        ತಳ್ಳಲಾರೆ ದಿವಸವ.

ಇಲ್ಲ, ಇನ್ನು ಹಿಡಿಯಲಾರೆ
         ಆ ಮಿಂಚಿನ ಚಾಣವ
ಇನ್ನು ನಾನು ಹೂಡಲಾರೆ
         ಹೆದೆಯೇರಿಸಿ ಬಾಣವ.

ಮತ್ತೆ ಎತ್ತಿ ನಿಲಿಸಲಾರೆ
         ಮುರಿದು ಬಿದ್ದ ಗುಡಿಗಳ
ಸುತ್ತ ಬಿದ್ದ ಬೂದಿಯೊಳಗೆ
         ಹುಡುಕಲಾರೆ ಕಿಡಿಗಳ.

ಬೇಡ ಬೇಡ ಬೇಡ ನನಗೆ
        ನಿನ್ನ ಕೃಪೆಯ ಸಂಕೋಲೆ,
ಇನ್ನೇತಕೆ ನಿನ್ನ ಹಂಗು
        ಕಾವ್ಯಸ್ಫೂರ್ತಿ ಚಂಚಲೆ.

                            - ಜಿ. ಎಸ್. ಶಿವರುದ್ರಪ್ಪ
                    ( 'ಕಾರ್ತೀಕ' ಕವನಸಂಕಲನದಿಂದ)

ನಿಂಬೆ ಗಿಡ

ಚಿತ್ರ ಕೃಪೆ: http://heatherbailey.typepad.com

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

                                - ಬಿ. ಆರ್. ಲಕ್ಷ್ಮಣರಾವ್

ಪೋರಿ ಪೋರ

ಚಿತ್ರ ಕೃಪೆ: weheartit.com
ಪೋರೀ ನೀನು, ನಾನು ಪೂರಾ
ಮಾರಿ ಕಣ್ಣಿಗೆ ಮರುಳರಾಗಿ
ನೆಚ್ಚಿ ಮೆಚ್ಚಿ ಕೂಡಿದ್ದೇವs
ಬೇರೆ ಇಲ್ಲಾ। ಇದ್ದಾರೆ ಶಿವನೆ ಬಲ್ಲಾ.

ಯಾಕ? ಏನು? ಎಲ್ಲಿಗಂತs
ನಾಕು ಮಾತು ಕೂಡಾ ನಾವು
ಒಬ್ಬರಿಗೊಬ್ಬರು ಆಗs
ಕೇಳಲಿಲ್ಲಾ। ಉತ್ತರಾ ಹೇಳಲಿಲ್ಲಾ

ಹೆಣ್ಣು ಮಣ್ಣು ಹಾsಳಂತs
ಬಣ್ಣ ಕಡೆಬಾಳದಂತs
ಬಾಳುವೀ ಸುಳ್ಳಾಟಂತs
ಹೆದರಲಿಲ್ಲಾ। ಯಾರೂ ಹೆದರಿಸಲಿಲ್ಲಾ

ಆಡಿದ್ದೊಂದs ನೋಡಿದ್ದೊಂದs
ಹೂಡಿದ್ದೊಂದs ಕೂಡಿದ್ದೊಂದs
ಬೇರೆ ಮಾತು ನನಗ ನಿನಗs
ಗೊತ್ತs ಇಲ್ಲಾ। ಗುಟ್ಟು ಶಿವನೆ ಬಲ್ಲಾ.

              - ದ ರಾ ಬೇಂದ್ರೆ
 ('ನಾದಲೀಲೆ' ಕವನ ಸಂಕಲನದಿಂದ)

ಕುರುಡ

ಕತ್ತಲೆಯು: ನಡುವಗಲ ಬೇಸಗೆಯ ನೇಸರಿರೆ
          ಬಯಲಲ್ಲಿ ಬೆಮರುತಿಹೆ! ಕಗ್ಗತ್ತಲೆನಗೆ!
ಕೋಗಿಲೆಯು ಕೂಗೆನಗೆ! ಬನಬೆಟ್ಟ ನುಡಿಯೆನಗೆ !
          ಸೌಂದರ್ಯವೆಂಬುದದು ಬರಿಯ ಸದ್ದೆನಗೆ !

ನನ್ನ ಭಿಕ್ಷಾಪಾತ್ರೆಗವನೆಸೆವ ಕಾಸುಗಳ
          ಸದ್ದೆನಗೆ ಮಾನವನ ಮಂಗಳಾಕಾರ !
ಬೆಳಕಿಲ್ಲ, ಕಪ್ಪಿಲ್ಲ; ಹಗಲಿರುಳು ನನಗಿಲ್ಲ;
          ನನ್ನಿನನು ಮೂಡಿಮುಳುಗವನೆನ್ನ ಕೂಡೆ!

ನರಜನ್ಮವತ್ಯಧಿಕವೆಂದೇಕೆ ಸಾರುತಿಹರು?
ಮಿಗಗಳಾನಂದವೆನಗಿಲ್ಲವೈ, ದೇವದೇವ !
ಕಣ್ಣಿರದ ಮಾನವನ ಜನ್ಮವೆನಗೇಕೆ, ದೇವ?
ಕಣ್ಣಿರುವ ಮಿಗತನದ ಬಾಳೆನಗೆ ಲೇಸು, ಲೇಸು!

                                                   - ಕುವೆಂಪು
                                ('ಹೊನ್ನ ಹೊತ್ತಾರೆ' ಕವನಸಂಕಲನದಿಂದ)

ಕುರಿಗಳು ಸಾರ್ ಕುರಿಗಳು

ಚಿತ್ರ ಕೃಪೆ:http://patterico.com/files/2011/04/Sheep_mouton.rebelle.jpg

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು -
ಕುರಿಗಳು ಸಾರ್ ಕುರಿಗಳು;
ನಮಗೊ ನೂರು ಗುರಿಗಳು.

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ
ಅವರು, ಇವರು ನಾವುಗಳು
ಕುರಿಗಳು ಸಾರ್ ಕುರಿಗಳು.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೆ ಸ್ವರ್ಗ ಮುಂದೆ
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ;
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು?

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು:
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು
ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು-
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.
ಕಿಂಡಿಯಿಂದ ತೆವಳಿಬಂದ ಗಾಳಿಕೂಡ ನಮ್ಮದೇನೆ:
ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪುಸವರಿ
ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆವಸನೆ
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈನಾತದ ಗಬ್ಬಿನಲ್ಲಿ,
ಇದರ ಉಸಿರು ಅದು ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು
ಕುರಿಗಳು ಸಾರ್ ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣುಕುಕ್ಕಿ ಸೊಕ್ಕಿರುವ, ಹೋಗಿಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ
ನಾವು, ನೀವು, ಅವರು, ಇವರು
ಕುರಿಗಳು ಸಾರ್ ಕುರಿಗಳು.

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳಾದ ಕಿಚ್ಚಿನಲ್ಲಿ
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು...

                                        - ಕೆ.ಎಸ್. ನಿಸಾರ್ ಅಹಮದ್
                          ( 'ನೆನೆದವರ ಮನದಲ್ಲಿ' ಕವನಸಂಕಲನದಿಂದ )