ನಿನ್ನ ಪ್ರೀತಿಗೆ


ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರಗೆ
ಹೊಂದಲಾರದ ಹೋಲಿಕೆ.

ನಿನ್ನ ಪ್ರೀತಿಗೆ, ಅದರ ರೀತಿಗೆ
ಚೆಲುವು ಕನಸಿನ ಜವನಿಕೆ ;
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ.

ತುಂಬಿ ಕೊರೆದಿಹ ಹೂವಿನೆದೆಯಲಿ
ನೋವು ಗಾಳಿಗೆ ಹಾಸಿಗೆ ;
ಜೇನು ಜೀವದ ನೆಳಲ ಪೊದೆಯಲಿ
ಗೂಡುಕಟ್ಟಿದೆ ಆಸೆಗೆ.

ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿಬೆರಳಿನ ಹಾಡಿಗೆ ;
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ.

ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ ;
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ.

ನೂರು ಕನ್ನಡಿಗಳಲಿ ಕಂಡೆನು
ನೋಡಬಾರದ ಮುಖವನು ;
ಇಳಿದ ಮುಖದಿಂಗಿತವನರಿತೆನು
ಅಸುಖ ಮುದ್ರಿತ ಸುಖವನು.

ನಗದ ಮುಖದಲಿ ನಿನ್ನ ಕಂಡೆನು
ತಿಳಿದ ಬಾನಿನ ಹರಹನು,
ಮೊದಲ ಮೋಹದ ಮಂಜು ಕದಲಲು
ಬದುಕು ತುಂಬಿದ ಹಗಲನು.

ನಿನ್ನ ಪ್ರೀತಿಗೆ, ಅದರ ರೀತಿಗೆ
ನೀಡಬಲ್ಲೆನೆ ಕಾಣಿಕೆ ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯೆ ಹೋಲಿಕೆ.

          - ಕೆ ಎಸ್ ನರಸಿಂಹಸ್ವಾಮಿ
('ಮನೆಯಿಂದ ಮನೆಗೆ'  ಕವನ  ಸಂಕಲನದಿಂದ)

ಬೆಳಗಾಗುವುದೇ ಬೇಡ!


ಹುಣ್ಣಿಮೆ ಬಾನಿನ ಕೆನ್ನೆಯ ಮೇಲೆ
ಪೂರ್ಣ ಚಂದಿರ ಬಂದಿತ್ತು ;
ಅದರ ಕೆಳಗೆ, ಎಲ್ಲೋ ಬಲು ಕೆಳಗೆ,
ರೋಹಿಣಿ ಹೊಳೆದಿತ್ತು.

ಒಸಗೆಯ ಕೋಣೆಯ ಮಂಚದ ಮೇಲೆ
ಕುಳಿತಿದ್ದವು ಗಂಡು ಹೆಣ್ಣು ;
ಸುತ್ತಲು ಬಗೆ ಬಗೆ ತಿನಿಸು, ಹಣ್ಣು,
ಹೂವಿನ ನರುಗಂಪು.

ತೆರೆದ ಕಿಟಕಿಯಿಂದೊಳಗೆ ಬಂದಿತ್ತು
ಮೆಲ್ಲಗೆ ತಂಬೆಲರು ;
ಗಂಡಿಗೆ ಒರಗಿದ ಹೆಣ್ಣು ಹೇಳಿತು -
'ಸುಖಮಯವೀ ಬದುಕು'.

ಕಿಟಕಿಯ ತುಂಬಾ ಚಂದಿರ, ತಾರಗೆ
ದೂರದಿ ಯಾವೂದೊ ಹಾಡು ;
ಮುತ್ತಿಕ್ಕುತ ಗಂಡಿಗೆ ಅದು ನುಡಿಯಿತು -
'ಚಂದಿರನಂತೀ ಬದುಕು'.

ಚಂದಿರನಡಿಯಲಿ ಚಲಿಸಿತು ಮೋಡ,
ಹೊಳೆಯಿತು ತಾರಗೆ ಎಲ್ಲೆಲ್ಲು ;
ಹೆಣ್ಣು ಹೇಳಿತು ಸಂತಸದಿಂದ -
'ಬೆಳಗಾಗುವುದೇ ಬೇಡ!'

        -  ಕೆ ಎಸ್ ನರಸಿಂಹಸ್ವಾಮಿ
('ಮೌನದಲಿ ಮಾತ ಹುಡುಕುತ್ತ' ಕವನ ಸಂಕಲನದಿಂದ)

ನಾನು ಕವಿಯಲ್ಲ


ನನ್ನ ಕೃತಿ ಕಲೆಯಲ್ಲ;
ನಾನು ಕವಿಯಲ್ಲ.
ಕಲೆಗಾಗಿ ಕಲೆಯೆಂಬ 
ಹೊಳ್ಳು ನೆಲೆಯಿಲ್ಲ.

ಮೆಚ್ಚುಗೆಯೆ ನನಗೆ ಕೊಲೆ;
ಬದುಕುವುದೆ ನನಗೆ ಬೆಲೆ.
ಸಾಧನೆಯ ಛಾಯೆ ಕಲೆ;
ವಿಶ್ವಾತ್ಮವದಕೆ ನೆಲೆ.
ನಿನಗದು ಚಮತ್ಕಾರ;
ನನಗೊ ಸಾಕ್ಷಾತ್ಕಾರ!
ಮೌನದಿಂದನುಭವಿಸು:
           ಕೋ ನಮಸ್ಕಾರ!
ಕಲೆಯೆಂದು ಹೊಗಳುವೊಡೆ:
           ಕೋಟಿ ಧಿಕ್ಕಾರ!
                                - ಕುವೆಂಪು 
   ( 'ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನಸಂಕಲನದಿಂದ )

ಅಸ್ತವ್ಯಸ್ತ



ನೀನು ಅರಳಿದ ಮೊಗ್ಗು, ಹಕ್ಕಿ ಹಾಡಿನ ಇಂಪು
ನಕ್ಷತ್ರಗಳ ಚೆಲ್ಲಿ ಹೋದ ಕವಿತೆ ;
ನಿದ್ದೆಯೂ ನೀನೆ, ಕನಸೂ ನೀನೆ ಇರುಳಿನಲಿ
ಅರ್ಥವಾಗದು ನನಗೆ ನಿನ್ನ ಪ್ರಶ್ನೆ.

ಹಸಿದ ಮಕ್ಕಳ ಕಣ್ಣನೀರು ನಿನ್ನಯ ಕವಿತೆ,
ಉಸಿರು ಕಟ್ಟುವೆ ಏಕೆ ಅದನು ಕೇಳಿ;
'ನೀರ ಬೆರಸದೆ ಹಾಲು ಮಾರುವುದೆ'? ಎನ್ನುವೆಯ,
ಅಂಥವರು ನಿನಗೆಲ್ಲಿ ಸಿಕ್ಕಬಹುದು ?

ನೀರು ಬೆರೆಸಿದ ಹಾಲು ಕುಡಿದು ಬೆಳೆದಿದೆ ಕಂದ,
ನೀರು ಬೆರಸದ ಹಾಲು ನಿನ್ನ ಕವಿತೆ ;
ಟೀಕೆ ಟಿಪ್ಪಣಿಗಳಿಗೆ ಬಲಿದೂರ ನೆಲಸಿಹುದು,
ತಂಬೆಲರ ನುಡಿಯಲ್ಲು ಅರ್ಥವಿರಬಹುದು.

ಬರಿಮೈಯ ಹೆಣ್ಣು ಪೀತಾಂಬರದ ಗೀತವನು
ಹಾಡುತ್ತ ಬರುತಿಹಳು ಬೀದಿಯಲ್ಲಿ ;
ಬದುಕು ಅಸ್ತವ್ಯಸ್ತ ; ಗುರಿ ದಾರಿಗಳ ನಡುವೆ
ಕಂದಕಗಳಿರುವುದನು ನಾನು ಬಲ್ಲೆ.

ನಿನ್ನ ತೂಕಡಿಕೆಯನು ನಾನೀಗ ಕಂಡಿಹೆನು,
ನಿನ್ನ ಕೋಣೆಗೆ ಹೋಗಿ ಮಲಗು ನಲ್ಲೆ!

         - ಕೆ ಎಸ್ ನರಸಿಂಹಸ್ವಾಮಿ

ಸರ್ವಜಿತು


ಕೆರೆ ತುಂಬಿ ಹಳ್ಳಕಾಲುವೆಗಳಲಿ ನೀರೋಡಿ
ಮೇಡು ಬನ ಬಯಲು ಬಾಳೆಲ್ಲ ಹಚ್ಚಗೆ ಹಾಡಿ
ಗಿಡಬಳ್ಳಿ ಹೂಮುಡಿದು ಹೆಣ್ಣ ಹೊರೆಯಲಿ ಬಳಲಿ
ಶಾಂತಿಯಲಿ ನಾಡು ನಗಲಿ !
ಗುಡ್ಡ ಗುಡಿಗೋಪುರದ ಗಂಟೆಗಳ ಹಿರಿದನಿಗೆ
ಒಲಿದು ಕೈ ಮುಗಿದು ನಾಡೆಲ್ಲ ತಿಳಿಬಾನೆದೆಗೆ
ಹರಕೆಯನು ಹೊರಲಿ, ಸಂತೋಷ ತನ್ನೊಳಗುಡಿಗೆ
ನುಗ್ಗಿಬರಲೆಂದು ಬೆಳಕಾಗಿ !
ಸರ್ವಜಿತು ಸಕಲ ಲೋಕದ ಚರಾಚರ ಜೀವ
ವರ್ಗವರ್ಗಾಂತರಗಳೆಲ್ಲ ಸೋದರಭಾವ
ಸೌಖ್ಯಸಂತೃಪ್ತಿ ಧೀರೋತ್ಸಾಹಮಾರ್ಗದಲಿ
ಹೆಜ್ಜೆಯಿಡಲೆಂದು, ಸ್ವರ್ಗದ ಕನಸು ಭೂಮಿಯಲಿ
ತುಂಬಿಕೊಳಲೆಂದು ಹರಸಲಿ ! ತನ್ನ ಕಾಲದಲಿ
ಉನ್ನತಿಗೆ ನಾಡ ನಡಸಲಿ !

           - ಕೆ ಎಸ್ ನರಸಿಂಹಸ್ವಾಮಿ
('ಉಂಗುರ' ಕವನ ಸಂಕಲನದಿಂದ)

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!




ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ನಿಂತರೆ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಓದಿದರೆ ಹೇಳುವರು ಮತ್ತೊಮ್ಮೆ ಬರೆಯೊ
ಬರೆದಿಡಲು ಬೆದಕುವರು ಬರವಣಿಗೆ ಸರಿಯೋ
ಇವರ ಬಯಕೆಗಳೇನೋ ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

                       - ಕೆ ಎಸ್ ನರಸಿಂಹಸ್ವಾಮಿ

ಹಿನ್ನುಡಿ


ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ.
ದಾರಿ ನೂರಾರಿವೆ ಬೆಳಕಿನರಮನೆಗೆ!
ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ;
ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ.
ನಾ ಬಲ್ಲೆ, ಇವು ಎಲ್ಲ ಏರುವೆಯ
ಒಂದೊಂದು ಹಂತ.
ನೂರಾರು ಭಾವದ ಬಾವಿ; ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ.
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ?
ನಮಗೆ ಬೇಕಾದದ್ದು ದಾಹ ಪರಿಹಾರ.

            - ಜಿ ಎಸ್ ಶಿವರುದ್ರಪ್ಪ
   ("ದೀಪದ ಹೆಜ್ಜೆ" ಕವನಸಂಕಲನದಿಂದ)

ಆಕಾಶದ ಹೆಬ್ಬಯಲಿನಲಿ


ಆಕಾಶದ ಹೆಬ್ಬಯಲಿನಲಿ
ಬೆಚ್ಚನೆ ಬಿಸಿಲಿನಲಿ
ಚಳಿಕಾಯುತ್ತಿವೆ
ಅಲೆಯುತ್ತಿವೆ
ಸುತ್ತುತ್ತಿವೆ
ಬಿಳಿ ಮುಗಿಲಿನ ಮುಂದೆ
ಹಿಂದೆ ಮುಂದೆ!
ನನ್ನಿಳೆಯೀ ಹಸುರ್ಬಯಲೀ
ಎಳೆ ಗರುಕೆಯ ಹಾಸಿನಲಿ
ಚಲಿಸದವೊಲೆ ಚಲಿಸುತ್ತಿವೆ
ಮೇಯುತ್ತಿಹ ಗೋವು!
ಮೃದುಗಾಳಿಯು ಬೀಸುತ್ತಿರೆ
ಹರೆಹರೆಯಲಿ ತಳಿರೆಲೆಯಲಿ
ಮರ್ಮರ ದನಿಗೈಯುತ್ತಿದೆ
ಎಲೆ ತುಂಬಿದ ಮಾವು
ಹೊಸ ಹಸಲೆಯ ಹಸುರೆದೆಯಲಿ
ಮುದ್ದಾಗಿಹ ಬಿಳಿ ಕುರಿಮರಿ
ನೆಗೆಯುತ್ತಿರೆ ಚಿಗಿಯುತ್ತಿರೆ,
ಕಂಠದೊಳಿಹ ಕಿಂಕಿಣಿಯೂ
ಟಿಂಟಿಣಿ ಟಿಣಿ ಟಿಂಟಿಣಿ ಟಿಣಿ
ಸಂತೋಷವ ಘೋಷಿಸುತಿರೆ
ಸುಖವಲ್ಲವೆ?-ಪೇಳಲ್ಲವೆ
ಈ ಬಾಳಿನ ನೋವೂ?
ಎಲ್ಲೆಲ್ಲಿಯು ಯಾರಲ್ಲಿಯು
ಉದ್ವೇಗವೆ ಇಲ್ಲ;
ಸೂಸುತ್ತಿದೆ ಹರಿಯುತ್ತಿದೆ
ತುಂಬುತ್ತಿದೆ ತುಳುಕುತ್ತಿದೆ
ಬಾಳಿನ ಜೇನ್ಬೆಲ್ಲ!
ಎಲ್ಲವು ‘ಇವೆ’! ಸುಮ್ಮನೆ ‘ಇವೆ’!
ಅರಿಯುವ ಗೋಜಿಲ್ಲ!
ಮನುಜನು ನಾನ್ ಎನ್ನೆದೆಯಲಿ
ಅರಿವೆಂಬುವ ಬಾವು
ಕೀವಾಗಿರೆ ನೋವಾಗಿರೆ
ಬಾಳ್ಬೆಲ್ಲವೆ ಬೇವು!

             - ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)