ಕಣ್ಣೀರು

ಚಿತ್ರ ಕೃಪೆ http://www.fanpop.com
ಕಣ್ಣೀರು ಹನಿಯಲ್ಲಿ ಮೊಗದ ನಗೆಯನು ಕಂಡೆ
ಕಣ್ಣೀರ ಹನಿಯಲ್ಲಿ ಜಗದ ಹೃದಯವ ಕಂಡೆ
ಕಣ್ಣೀರಿನಲಿ ವಿವಿಧ ಅನುಭವದ ಸವಿಯುಂಡೆ
               ಕಣ್ಣೀರಿಗಿಂ ಮಿಗಿಲು ತತ್ವಬೋಧಕರಿಲ್ಲ
               ಮುನ್ನೀರು ಎಂಬುದೂ ಕಣ್ಣೀರೆ ಎಲ್ಲ !

ಕಣ್ಣೀರ ಹೊಳೆಯಲ್ಲಿ ರಾಜ್ಯಗಳು ಉದಿಸಿದುವು
ಕಣ್ಣೀರ ಹೊಳೆಯಲ್ಲಿ ಮಕುಟಗಳು ತೇಲಿದುವು
ಕಣ್ಣೀರಿನಲಿ ಕಾಲದೇಶಗಳು ಕರಗುವುವು
               ವಿಶ್ವದಲಿ ತೇಲುವೀ  ಬ್ರಹ್ಮಾಂಡಗಳು ಎಲ್ಲ
               ಕಣ್ಣೀರಿನುಂಡೆಗಳೋ, ಬಲ್ಲವನೆ  ಬಲ್ಲ !

                                                         - ಜಿ. ಎಸ್. ಶಿವರುದ್ರಪ್ಪ
                                               ( 'ಸಾಮಗಾನ' ಕವನ ಸಂಕಲನದಿಂದ )

ಕವಿತೆಗೆ

ಚಿತ್ರ ಕೃಪೆ: http://userserve-ak.last.fm
ಇಲ್ಲ, ಇನ್ನು ಬರೆಯಲಾರೆ
        ತೆರೆಯಲಾರೆ ಹೃದಯವ,
ನಿನ್ನ ನಿರೀಕ್ಷಣೆಯೋಳಿನ್ನು
        ತಳ್ಳಲಾರೆ ದಿವಸವ.

ಇಲ್ಲ, ಇನ್ನು ಹಿಡಿಯಲಾರೆ
         ಆ ಮಿಂಚಿನ ಚಾಣವ
ಇನ್ನು ನಾನು ಹೂಡಲಾರೆ
         ಹೆದೆಯೇರಿಸಿ ಬಾಣವ.

ಮತ್ತೆ ಎತ್ತಿ ನಿಲಿಸಲಾರೆ
         ಮುರಿದು ಬಿದ್ದ ಗುಡಿಗಳ
ಸುತ್ತ ಬಿದ್ದ ಬೂದಿಯೊಳಗೆ
         ಹುಡುಕಲಾರೆ ಕಿಡಿಗಳ.

ಬೇಡ ಬೇಡ ಬೇಡ ನನಗೆ
        ನಿನ್ನ ಕೃಪೆಯ ಸಂಕೋಲೆ,
ಇನ್ನೇತಕೆ ನಿನ್ನ ಹಂಗು
        ಕಾವ್ಯಸ್ಫೂರ್ತಿ ಚಂಚಲೆ.

                            - ಜಿ. ಎಸ್. ಶಿವರುದ್ರಪ್ಪ
                    ( 'ಕಾರ್ತೀಕ' ಕವನಸಂಕಲನದಿಂದ)

ನಿಂಬೆ ಗಿಡ

ಚಿತ್ರ ಕೃಪೆ: http://heatherbailey.typepad.com

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

                                - ಬಿ. ಆರ್. ಲಕ್ಷ್ಮಣರಾವ್

ಪೋರಿ ಪೋರ

ಚಿತ್ರ ಕೃಪೆ: weheartit.com
ಪೋರೀ ನೀನು, ನಾನು ಪೂರಾ
ಮಾರಿ ಕಣ್ಣಿಗೆ ಮರುಳರಾಗಿ
ನೆಚ್ಚಿ ಮೆಚ್ಚಿ ಕೂಡಿದ್ದೇವs
ಬೇರೆ ಇಲ್ಲಾ। ಇದ್ದಾರೆ ಶಿವನೆ ಬಲ್ಲಾ.

ಯಾಕ? ಏನು? ಎಲ್ಲಿಗಂತs
ನಾಕು ಮಾತು ಕೂಡಾ ನಾವು
ಒಬ್ಬರಿಗೊಬ್ಬರು ಆಗs
ಕೇಳಲಿಲ್ಲಾ। ಉತ್ತರಾ ಹೇಳಲಿಲ್ಲಾ

ಹೆಣ್ಣು ಮಣ್ಣು ಹಾsಳಂತs
ಬಣ್ಣ ಕಡೆಬಾಳದಂತs
ಬಾಳುವೀ ಸುಳ್ಳಾಟಂತs
ಹೆದರಲಿಲ್ಲಾ। ಯಾರೂ ಹೆದರಿಸಲಿಲ್ಲಾ

ಆಡಿದ್ದೊಂದs ನೋಡಿದ್ದೊಂದs
ಹೂಡಿದ್ದೊಂದs ಕೂಡಿದ್ದೊಂದs
ಬೇರೆ ಮಾತು ನನಗ ನಿನಗs
ಗೊತ್ತs ಇಲ್ಲಾ। ಗುಟ್ಟು ಶಿವನೆ ಬಲ್ಲಾ.

              - ದ ರಾ ಬೇಂದ್ರೆ
 ('ನಾದಲೀಲೆ' ಕವನ ಸಂಕಲನದಿಂದ)