ಕುರುಡ

ಕತ್ತಲೆಯು: ನಡುವಗಲ ಬೇಸಗೆಯ ನೇಸರಿರೆ
          ಬಯಲಲ್ಲಿ ಬೆಮರುತಿಹೆ! ಕಗ್ಗತ್ತಲೆನಗೆ!
ಕೋಗಿಲೆಯು ಕೂಗೆನಗೆ! ಬನಬೆಟ್ಟ ನುಡಿಯೆನಗೆ !
          ಸೌಂದರ್ಯವೆಂಬುದದು ಬರಿಯ ಸದ್ದೆನಗೆ !

ನನ್ನ ಭಿಕ್ಷಾಪಾತ್ರೆಗವನೆಸೆವ ಕಾಸುಗಳ
          ಸದ್ದೆನಗೆ ಮಾನವನ ಮಂಗಳಾಕಾರ !
ಬೆಳಕಿಲ್ಲ, ಕಪ್ಪಿಲ್ಲ; ಹಗಲಿರುಳು ನನಗಿಲ್ಲ;
          ನನ್ನಿನನು ಮೂಡಿಮುಳುಗವನೆನ್ನ ಕೂಡೆ!

ನರಜನ್ಮವತ್ಯಧಿಕವೆಂದೇಕೆ ಸಾರುತಿಹರು?
ಮಿಗಗಳಾನಂದವೆನಗಿಲ್ಲವೈ, ದೇವದೇವ !
ಕಣ್ಣಿರದ ಮಾನವನ ಜನ್ಮವೆನಗೇಕೆ, ದೇವ?
ಕಣ್ಣಿರುವ ಮಿಗತನದ ಬಾಳೆನಗೆ ಲೇಸು, ಲೇಸು!

                                                   - ಕುವೆಂಪು
                                ('ಹೊನ್ನ ಹೊತ್ತಾರೆ' ಕವನಸಂಕಲನದಿಂದ)

ಕುರಿಗಳು ಸಾರ್ ಕುರಿಗಳು

ಚಿತ್ರ ಕೃಪೆ:http://patterico.com/files/2011/04/Sheep_mouton.rebelle.jpg

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು -
ಕುರಿಗಳು ಸಾರ್ ಕುರಿಗಳು;
ನಮಗೊ ನೂರು ಗುರಿಗಳು.

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ
ಅವರು, ಇವರು ನಾವುಗಳು
ಕುರಿಗಳು ಸಾರ್ ಕುರಿಗಳು.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೆ ಸ್ವರ್ಗ ಮುಂದೆ
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ;
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು?

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು:
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು
ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು-
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.
ಕಿಂಡಿಯಿಂದ ತೆವಳಿಬಂದ ಗಾಳಿಕೂಡ ನಮ್ಮದೇನೆ:
ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪುಸವರಿ
ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆವಸನೆ
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈನಾತದ ಗಬ್ಬಿನಲ್ಲಿ,
ಇದರ ಉಸಿರು ಅದು ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು
ಕುರಿಗಳು ಸಾರ್ ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣುಕುಕ್ಕಿ ಸೊಕ್ಕಿರುವ, ಹೋಗಿಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ
ನಾವು, ನೀವು, ಅವರು, ಇವರು
ಕುರಿಗಳು ಸಾರ್ ಕುರಿಗಳು.

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳಾದ ಕಿಚ್ಚಿನಲ್ಲಿ
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು...

                                        - ಕೆ.ಎಸ್. ನಿಸಾರ್ ಅಹಮದ್
                          ( 'ನೆನೆದವರ ಮನದಲ್ಲಿ' ಕವನಸಂಕಲನದಿಂದ )

ಮೂಕಂ ಕರೋತಿ ವಾಚಾಲಂ



ಶೂನ್ಯಾಂತರಂಗದಿಂದಡವಿಯೊಳು ಬೆಳದಿರುವ 
          ಕಿರುಬಿದಿರಿನಂತೆ ನಾನಿಹೆನು, ಗುರುವೆ.
ಸಮೆದದನು ಮಾಡಿ ಕೊಳಲನು ನಿನ್ನ ಉಸಿರೂದಿ
          ಶೂನ್ಯತೆಯ ಕಳೆದು ಪೂರ್ಣತೆಯ ನೀಡು .
ಟೊಳ್ಳಿನಿಂದಿಂಚರದ ರಸಲಹರಿ ಹೊಮ್ಮುವುದು
         ನಿನ್ನ ಕೈಯಲಿ ನಾನು ವೆಣುವಾಗೆ !
'ಮೂಕಂ ಕರೋತಿ ವಾಚಾಲಮ್ ' ಎಂಬಂದದಲಿ
        ಸೊನ್ನೆಯಿಂದುಣ್ಮುವುದು ಸುರಗಾನವು !

ನೀನುಳಿಯೆ ನಾನೇನು? ಬರಿ ಬಿದಿರಿನಂತೆ !
          ಶ್ರೀಕೃಷ್ಣನಿಲ್ಲದಿಹ ಕೊಳಲಿನಂತೆ !
          ಶೇಷಾರ್ಯನಿಲ್ಲದಿಹ ವೀಣೆಯಂತೆ !
ಭಾವವಿಲ್ಲದ ಬರಿಯ ಜಡಮೂಕನಂತೆ !

                                                        - ಕುವೆಂಪು
                                ('ಹೊನ್ನು ಹೊತ್ತಾರೆ' ಕವನ ಸಂಕಲನದಿಂದ)

ಮುಳುಗುತಿದೆ ಕಿರುದೋಣಿ

ಮುಳುಗುತಿದೆ, ಮುಳುಗುತಿದೆ ಕಿರುದೋಣಿ, ಗುರುದೇವ,
          ಮೇರೆಯಿಲ್ಲದ ಕಡಲು ಬಳಸಿ ಮೊರೆಯುತಿದೆ;
ಕತ್ತಲೆಯು ಕವಿಯುತಿದೆ; ಬಿರುಗಾಳಿ ಬೀಸುತಿದೆ;
          ಗುಡುಗುತಿದೆ, ಮಿಂಚುತಿದೆ, ಸಿಡಿಲು ಬಡಿಯುತಿದೆ.
ಕೆರಳಿರುವ ಕೇಸರಿಗಲಂದದದಲಿ ಗರ್ಜಿಸುತ
          ನುಗ್ಗುತಿಹವಪ್ಪಳಿಸಿ ಬಲ್ದೆರೆಗಳಾಲಿ;
ನೆಚ್ಚಿಲ್ಲ, ಕೆಚ್ಚಿಲ್ಲ, ಬಲವಿಲ್ಲ, ಚಲವಿಲ್ಲ ,
          ಹುಟ್ಟು ಕೈಯಿಂದುದುರಿ ಕೆಳಗೆ ಬಿದ್ದಿಹುದು!

ತೆರೆಗಳೋಡನು ನುಂಗುವಾ ಮುನ್ನ ಬಂದು ಕಾಯಿ!
ಅರೆಗೆ ದೋಣಿಯು ಬಡಿದೊಡೆವ ಮುನ್ನ ಬಂದು ಕಾಯಿ!
ಮುಳುಗಿ ನಾ ಕಡಲಡಿಯೊಳೊರಗುವಾ ಮುನ್ನ ಕಾಯಿ!
ಎದೆಯೊಡೆದು ಅಸುವಳಿವ ಮುನ್ನ ನೀನೆನ್ನ ಕಾಯಿ!

                                                        - ಕುವೆಂಪು
                                    ('ಹೊನ್ನ ಹೊತ್ತಾರೆ' ಕವನಸಂಕಲನದಿಂದ ) 

ಬೈರಾಗಿಯ ಹಾಡು


ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ ।। ಇಕೋ ನೆಲ.....

                   - ದ ರಾ ಬೇಂದ್ರೆ
 ('ಸಖೀಗೀತ' ಕವನ ಸಂಕಲನದಿಂದ)

ಚೈತನ್ಯದ ಪೂಜೆ


ಚೈತನ್ಯದ ಪೂಜೆ ನಡೆದSದ
ನೋಡS ತಂಗಿ।। ಅಭಂಗದ ಭಂಗೀS ।। ಪ ।।


ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ
ಸಾಮರ್ಥ್ಯ ಎಂಬುದು ಬೆಲಪತ್ರಿ
ಶಿವಗರ್ಪಿತ ಇರಲಿ ಖಾತ್ರಿ.


ಸತ್ಯ ಎಂಬುವ ನಿತ್ಯದ ದೀಪ
ಸುತ್ತೆಲ್ಲಾ ಅವನದೇ ರೂಪ
ಪ್ರೀತಿ ಎಂಬುವ ನೈವೇದ್ಯ
ಇದು ಎಲ್ಲರ ಹೃದಯದ ಸಂವೇದ್ಯ.


ಸೌಂದರ್ಯ ಧ್ಯಾನಾ ಎದೆಯಲ್ಲಿ
ಅಸ್ಪರ್ಶಾ ಚಿನ್ಮಯದಲ್ಲಿ
ಆನಂದಗೀತ ಸಾಮSವೇದಾ
ಸರಿಗಮ ನಾದಾ.


'ಉದ್ಭವ'  'ಉದ್ಭವ' ಹೇ ಮಂಗಳ ಮೂರ್ತಿ
ಅಲಲಾ!  ಆಹಹಾ!  ಅಮಮಾ!
ಆತ್ಮಾ ಪರಮಾತ್ಮಾ ಅಂತSರಾತ್ಮಾ
ಘನವೋ ಘನ! ನಿಮ್ಮಾ ಮಹಿಮಾ!

                                               - ದ ರಾ ಬೇಂದ್ರೆ
                                 ( 'ನಾಕುತಂತಿ' ಕವನ ಸಂಕಲನದಿಂದ)

 ವಿಶೇಷ : ಬೇಂದ್ರೆಯವರು ತಮ್ಮ ಪ್ರಥಮ ಮೊಮ್ಮಗ ಚಿ. ಪ್ರಭಾಕರನ ಧ್ಯಾನಕ್ಕಾಗಿ ರಚಿಸಿದ ಸಾಧನಾಗೀತ ಇದು.

ಒಂದು


ಆದರೂ ಹೋದರೂ
ಎಲ್ಲಾ ದಂತಕಥೀ
ಇರುವವರ ಸ್ಥಿತೀ - ಗತೀ
ಮುಂಗಾಣದೋ !


ಇದ್ದದ್ದು ಇಲ್ಲದ್ದು
ಒಂದೇ ಮಾಡಬೇಡಾ
ಶುದ್ಧಿ ಇಲ್ಲದಾ ಸುದ್ಧಿ
ಬರಿದೋ ಅಶುದ್ಧೀ


ಮಾತಿನೊಳಗಿನ ಭಾವ
ಮೌನದೊಳಗಿನ ಜೀವಾ
ಅಂದದ್ದೆಲ್ಲಾ
ಚೆಂದಾ
ಹೇಗಾದೀತು ?

                                     - ದ. ರಾ. ಬೇಂದ್ರೆ 
                       ('ಬಾಲಬೋಧೆ' ಕವನ ಸಂಕಲನದಿಂದ)

ಜಿಜ್ಞ್ಯಾಸೆ

ಚಿತ್ರ ಕೃಪೆ: http://media.radiosai.org

ಏನು? ಯಾಕೆ? ಎಲ್ಲಿ? ಯಾರು?
ಎಂದು ತೊದಲನಾಡಿದೆ.
ಅಂದಿನಿಂದ ಇಂದುವರೆಗು
ಅದೇ ಹಾಡ ಹಾಡಿದೆ.

ಹತ್ತು ದೇಶ ನೋಡಿದೆ.
ನೂರು ಶಾಸ್ತ್ರ ಓದಿದೆ
ಮೊದಲು ತೊದಲು ಮಾತಿನಲ್ಲೆ
ಇನ್ನೂ ಇದೆ ಅರಿವಿನಲ್ಲೇ

ಏನು? ಯಾಕೆ? ಎಲ್ಲಿ? ಯಾರು?
ಇನ್ನೂನು ಕೇಳುವೆ
ಎದಯೆಲವಿತು ಕುಳಿತ ಗುರುವೆ!
ಹೇಳು ಏನ ಹೇಳುವೆ?

ಕತ್ತಲುಗಳ ದಾಟಿ ದಾಟಿ
ಬೆಳಕು ಬೆಳಕು ಎಂದೆನು
ಸಾವು ಸಾಸಿರಗಳ ಸಾರಿ
ಅಮೃತ ಎನುತ ಬಂದೆನು.

ಸಟೆಯ ತೆರೆಯು ತೆರೆಯುತ
ದಿಟವು ಮೇರೆವರೆಯುತ
ಬಂದರೇನು ಎಂದಿನಂತೆ
ಮುಂದೆಯು ಹಿಂದಿದ್ದ ಚಿಂತೆ 

ಇದು ಅದೃಷ್ಟ ಇದು ಅಗಮ್ಯ
ಎನುತ ಎನುತ ಸಾಗಿದೆ
ನಿನ್ನ ಪಾದದೆಡೆಗೆ ತಲೆಯು
ಅಡಿಗಡಿಗೂ ಬಾಗಿದೆ.

ಎಲ್ಲಿ ಏನು ರಮ್ಯವಾಗಿ
ಕಂಡರೆ ಮರುಳಾಗಿದೆ.
ಅದರತನದ ಅಗಮ್ಯತೆಗೆ
ಸೋತು ತಲೆಯ ತೂಗಿದೆ.

ಕಾಣುತಲಿದೆ ಭವ್ಯವು
ನೋಡುತಲಿದೆ ದಿವ್ಯವು.
ಒಂದನೊಂದು ಅರಸಿ ಮರೆಸಿ
ಆಗ ಈಗ ಬಿಡಿಸಿ ಬೆರಸಿ

ಜೀವವು ಸಂಭ್ರಮದೊಳೆಂದು
ನಿನ್ನನ್ನೇ ಕರೆದಿದೆ.
ಇಗೋ ಸೃಷ್ಟಿಪುಟದೊಳೆಲ್ಲು
ನಿನ್ನ ಹೆಸರೆ ಬರೆದಿದೆ.

ಮಾನವ ಚಾರಿತ್ರ್ಯದಲ್ಲಿ
ಎಷ್ಟೊ ಪ್ರಳಯವಾಗಿವೆ.
ಸ್ತ್ರೀಯ ಪ್ರೇಮ ಪುರುಷ ಭಾಗ್ಯ
ಕಾದು ಕಾದು ಮಾಗಿವೆ.

ನಾಗರಿಕತೆ ಮುಳುಗಿವೆ.
ಸಂಸ್ಕೃತಿಗಳು ಬೆಳಗಿವೆ
ಅಧಃಪತನವಾಗುತಿರಲು
ಅವತಾರವು ತೇಗುತಿರಲು

ಉದ್ಧಾರದ ಆಸೆಯಾಗಿ
ಮೂಲಜಲಕೆ ಮರಳಿವೆ
ಅಂತರಂಗದತ್ತ ನಯನ
ತಾನಾಗಿಯೆ ಹೊರಳಿವೆ.

ಹೃದಯ ಹೂಡಿ ಹತ್ತು ಆಟ
ಇಳಿಸಿ ಪ್ರೇಮಪಾಕಕೆ
ಊಟೆಯಾಗಿ ಎತ್ತಲಿಹುದು
ನರರ ನರಕ ನಾಕಕೆ.

ವಿಧಿವಿಲಾಸ ನಡೆದಿದೆ
ಹಳೆಯ ಹಾದಿ ಹಿಡಿದಿದೆ
ಪ್ರಕೃತಿ ತನ್ನ ಹಾಸ ಹಾಸಿ
ಮಾಯೆ ತನ್ನ ಬಲೆಯ ಬೀಸಿ

ಬಯಲಿನಲ್ಲಿ ಗಾಲಿಯಾಡಿ-
ದಂತೆ ನಮ್ಮ ಆಡಿಸಿ
ಕ್ರೀಡಿಸುವದು, ಬಾ ಕರುಣಿಸಿ
ಬೇರೆ ಆಟ ಮೂಡಿಸಿ.

ನಿನಗೆ ಲೀಲೆ ಸೇರುವಾಗ
ನನಗೆ ಏಕೆ ಬೇಸರ?
ಕಟ್ಟಿ ಮುರಿದು ಕೆಡಿಸು ಬೆಳಿಸು
ನೀನೆ ನನಗೆ ಆಸರ.

ಸಾಗಲಿಂತು ಚಕ್ರವು
ನಿನ್ನ ರೀತಿ ವಕ್ರವು
ನೀನು ಬಾ ಅನಂತನಾಗಿ
ಜೀವ ಇರಲಿ ಅಮೃತವಾಗಿ

ತಾಪ, ಪಾಪ, ನೋವು, ದುಃಖ,
ಚಿಂತೆ ಭೋಗದಾಟವು.
ನಟನ ಹಾಗೆ ಎನಿಸಲೆನಗೆ
ನಿನ್ನ ಕಲೆಯ ಮಾಟವು.

ಏನು ಆಟ! ಏನು ಮಾಟ!
ಕುತೂಹಲಕೆ ಆಡುವೆ
ಪ್ರಪಂಚವನು ಚಿತ್ರಿಸುತ್ತ
ನೀನೊ ಕಥೆಯ ಮಾಡುವೆ

ತಿಳಿಯದೆಂದು ತಿಳಿದಿತು
ಇಷ್ಟು ನನಗೆ ಹೊಳೆದಿತು
ಅಷ್ಟರಲ್ಲಿ ತೃಪ್ತಿ ನನಗೆ
ದಿನವು ಇದೊ ವಿನೋದ ನಿನಗೆ

ಆದರೇನು ಮತ್ತೆ ನಾನು
ಏನು? ಏಕೆ? ಕೇಳುವೆ
ಹಳೆಯದನ್ನೆ ಹೊಸೆಯಿಸಿ ನೀ
ರಸ ಹುಟ್ಟಿಸಿ ಹೇಳುವೆ.

                - ದ ರಾ ಬೇಂದ್ರೆ
 ('ಗಂಗಾವತರಣ' ಕವನ ಸಂಕಲನದಿಂದ)

ನಾವು ಹುಡುಗಿಯರೇ ಹೀಗೆ....

 
-೧-
ಹೌದು ಕಣೆ ಉಷಾ 
ನಾವು ಹುಡುಗಿಯರೇ ಹೀಗೆ....

ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.
ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
ಹೇಳಲೇಬೇಕು ಎನಿಸಿದ್ದನ್ನು
ಹೇಳಹೋಗಿ ಹೆದರಿ ಏನೇನೋ ತೊದಲುತ್ತೇವೆ.
'ಐ ಲವ್ ಯೂ' ಅಂತ ಹೇಳಲು ಕಷ್ಟಪಟ್ಟು
ಬೇರೆ ಏನೇನೋ ದಾರಿ ಹುಡುಕಿ
ಸಂದೇಶ ಮುಟ್ಟಿಸಲು ಹೆಣಗುತ್ತೇವೆ.
ಅದನ್ನು ಅರ್ಥ ಮಾಡಿಕೊಳ್ಳಲಾರದೆ
ಹುಡುಗರು ಕೈ ತಪ್ಪಿದಾಗ
ಮುಸು ಮುಸು ಅಳುತ್ತೇವೆ.
ಕೊನೆಗೆ ಬೇರೆ ಯಾರನ್ನೋ ಮದುವೆಯಾಗಬೇಕಾದಾಗ
ನಾವೇ ದುರಂತ ನಾಯಕಿಯರೆಂದು
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ.
ಗಂಡನಲ್ಲಿ 'ಅವನನ್ನು' ಹುಡುಕುತ್ತೇವೆ.
ಗಂಡನಿಗೆ  ಮಾತ್ರ ಅದರ ಸುಳಿವೂ ಸಿಗದಂತೆ ನಟಿಸುತ್ತೇವೆ.
ಅಷ್ಟರಲ್ಲಿ ಒತ್ತಿಟ್ಟ ಭಾವನೆಗಳೆಲ್ಲ ಹರಳಾಗಿಬಿಟ್ಟಿರುತ್ತವೆ
ಅರಳುವುದೇ ಇಲ್ಲ ಉಷಾ...

-೨-
ನಾಲ್ಕು ವರ್ಷಗಳಲ್ಲಿ ವಿಪರೀತ ದಪ್ಪಗಾಗಿ
ಕೈಗೊಂದು ಕಾಲಿಗೊಂದು ಮಕ್ಕಳಾಗಿ
ಏದುಸಿರು ಬಿಡುತ್ತಾ ತರಕಾರಿ ಕೊಳ್ಳುವಾಗ
'ಅವನು' ಸಿಗುತ್ತಾನೆ.
ನಮ್ಮ ಇಂದಿನ ಅವಸ್ಥೆಗೆ ಇವನೇ ಕಾರಣ
ಅಂತ ರೋಷ ತಾಳುತ್ತೇವೆ.
ಆದರೆ ಮೇಲೆ ನಗುನಗುತ್ತಾ 'ಅವನ'
ಹೆಂಡತಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತೇವೆ.
ಯಾಕೆಂದರೆ ಅವಳದ್ದೂ ಅದೇ ಕಥೆಯಲ್ಲವೇ?

ನಾವು ಹುಡುಗಿಯರೇ ಹೀಗೆ....

                       - ಪ್ರತಿಭಾ ನಂದಕುಮಾರ್ 

ಬುದ್ಧಿವಂತರಿಗೆ ಕನಸು ಬಿದ್ದರೆ


ಪ್ರಾಚೀನ ಚೀನದಲ್ಲಿ ಬುದ್ಧಿವಂತ
ಒಬ್ಬನಿಗೆ ಪ್ರತಿ ರಾತ್ರಿ
ಕನಸು.
         ಪ್ರತಿ ರಾತ್ರಿ ಮುಸುಂಬಿ-
ಬಣ್ಣದ ಚಿಟ್ಟೆಯಾಗಿ ನೈದಿಲೆಯಿಂದ
ಸೇವಂತಿಗೆ
         ಸೇವಂತಿಯಿಂದ ನೈದಿಲೆಗೆ
ಹಾರಿ ಹಾರಿ ಗಾಳಿಯಲ್ಲಿ ತೇಲಿದ ಹಾಗೆ
ಕನಸು.
        ಎಷ್ಟೋ ರಾತ್ರಿ ಚಿಟ್ಟೆಯಾಗಿ
ಕನಸು ಕಂಡು ಕಡೆಗೆ 
                    ಮನುಷ್ಯನೋ
ಚಿಟ್ಟೆಯೋ
         ರಾತ್ರಿಯ ಚಿಟ್ಟೆ
ಹಗಲು ಮನುಷ್ಯನ ಕನಸೋ
ಹಗಲು
        ರಾತ್ರಿಯ ಕನಸೋ
ತಿಳಿಯದೆ ಭ್ರಮೆ ಹಿಡಿಯಿತು.

           - ಎ ಕೆ ರಾಮಾನುಜನ್ 

ವಿರಹಿ - ಚುಂಬಿತ


ಕಾಮವಿದು ಮೈಗಾವು
ಜೀವದ ಬಾವು
ಚಿತ್ತದ ನೋವು
ಎನ್ನರಸಿ

ಪ್ರೆಮವದಕದೆ ಮದ್ದು
ಉಳಿದುದನೊದ್ದು
ಬಂತೀ ಮುದ್ದು
ನಿನ್ನರಸಿ

ವಿರಹಿ ಬಿಟ್ಟುಸಿರಂತೆ
ಅದರಾ ಚಿಂತೆ
ಯಾರಿಗೆ ಅಂತೆ
ಇದು ಸಂತೆ

ತೇಲುವದು ಪರದೇಸಿ
ಇರಲೂ ಹೇಸಿ
ಆ ದರವೇಶಿ
ಇರುವಂತೆ

ಜನುಮ ಜನುಮದ ದಾಹ
ಎಂದಿಗೆ ಸ್ನೇಹ
ದೊರೆವುದೊ ಆಹ
ಎಂದುರಿದು

ಇದುವೆ ಇರುಳಿನ ಹಾದಿ
ಬೆಳಕಿನ ಬೂದಿ
ಅದಕೆ ಅನಾದಿ
ಎಂದರಿದು

ಉಳಿವುದೇ ತಾ ಬಾಳಿ
ಹೇಳಿ ಕೇಳಿ
ಕೊನೆಗೂ ಗಾಳಿ
ಈ ಉಸಿರು.

ಕೊಲ್ಲುವವನೇ ಕಾವ
ತಾಳೆನೆ ನೋವ
ಇಂದಿಗೆ ಜೀವ
ಬರಿ ಹೆಸರು.

ಆಸೆಯುಸಿರನು ಚಾಚಿ
ಹೊರಟ ಪಿಶಾಚಿ
ಗಾಳಿಯ ಬಾಚಿ
ಬರುತಿಹುದೋ.

ನರಕ ತಪ್ಪಿಸಿ ಚಿನ್ನ
ಕಾವುದು ನನ್ನ
ಮುಕ್ತಿಯು ನಿನ್ನ
ಹೊರತಿಹುದೋ?

            - ದ ರಾ ಬೇಂದ್ರೆ
('ಗಂಗಾವತರಣ' ಕವನ ಸಂಕಲನದಿಂದ)

ಮತ್ತದೇ ಬೇಸರ

                                                                                    credit:http://flickrhivemind.net

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||

ಕಣ್ಣನೇ ದಣಿಸುವ ಈ ಪಡುವಣ ಬಾನ್ ಬಣ್ಣಗಳು
ಮಣ್ಣನೇ ಹೊನ್ನಿನ ಹಣ್ಣಾಗಿಸುವೀ ಕಿರಣಗಳ
ಹಚ್ಚನೇ ಹಸುರಿಗೆ ಹಸೆಯಿಡುತಿರುವೀ ಖಗಗಾನ
ಚಿನ್ನ ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ || ಮತ್ತದೇ ||

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ
ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ
ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲಿಸು ಬಾ || ಮತ್ತದೇ ||
                                            
                                                 - ಕೆ. ಎಸ್. ನಿಸಾರ್ ಅಹ್ಮದ್
                                            ('ನಿತ್ಯೋತ್ಸವ' ಕವನ ಸಂಕಲನದಿಂದ)

ಕರ್ನಾಟಕ ಗೀತ



ಪಡುವಣ ಕಡಲಿನ ನೀಲಿಯ ಬಣ್ಣ,
ಮುಡಿಯೊಳು ಸಂಜೆಯ ಅಂಚಿನ ಚಿನ್ನ,
ಹೊಳೆಗಳ ಸೆರೆಗಿನ ಪಚ್ಚೆಯ ಬಯಲು,
ಬಿರುಮಳೆಗಂಜದ ಬೆಟ್ಟದ ಸಾಲು,
ಹುಲಿ ಕಾಡನೆಗಳಲೆಯುವ ಕಾಡಿದು,
ಸಿರಿಗನ್ನಡ ನಾಡು!

ಕಲ್ಲಿಗೆ ಬಯಸಿದ ರೂಪವ ತೊಡಿಸಿ,
ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ,
ದಾನ ಧರ್ಮಗಳ ಕೊಡುಗೈಯಾಗಿ,
ವೀರಾಗ್ರಣಿಗಳ ತೊಟ್ಟಿಲ ತೂಗಿ,
ಬೆಳಗಿದ ನಾಡಿದು, ಚಂದನಗಂಪಿನ
ಸಿರಿಗನ್ನಡ ನಾಡು!

ಇಲ್ಲಿ ಅರಳದಿಹ ಹೂವುಗಳಿಲ್ಲ :
ಹಾಡಲು ಬಾರದ ಹಕ್ಕಿಗಳಿಲ್ಲ -
ಸಾವಿರ ದೀಪಗಳರಮನೆಯೊಳಗೆ
ಶರಣೆನ್ನುವೆನೀ ವೀಣಾಧ್ವನಿಗೆ.
ಕನ್ನಡ ನಾಡಿದು ; ಮಿಂಚುವ ಕಂಗಳ
ಸಿರಿಗನ್ನಡ ನಾಡು.

            - ಕೆ ಎಸ್ ನರಸಿಂಹಸ್ವಾಮಿ
('ನವ ಪಲ್ಲವ' ಕವನ ಸಂಕಲನದಿಂದ)  

ವನಸುಮ

ಚಿತ್ರ ಕೃಪೆ : jayeckert.com
ವನಸುಮದೊಲೆನ್ನ ಜೀ
ವನವು ವಿಕಸಿಸುವಂತೆ
ಮನವನುಗೊಳಿಸು ಗುರುವೇ-ಹೇ ದೇವ

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮ ಭರಿತ ಪಾ
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು

                      - ಡಿ.ವಿ.ಗುಂಡಪ್ಪ 

ಬುದ್ಧ



ಬುದ್ಧ, ಬುದ್ಧ -
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ;
ಮಡದಿ ಮಗು ಮನೆ - ಮಾರು ರಾಜ್ಯ - ಗೀಜ್ಯ
ಹೊತ್ತಿರುವ ಉರಿಯಲಿ ಆಯಿತಾಜ್ಯ
ಹಿಂದೆ ಬಿದ್ದವು ಎಲ್ಲೋ ಕುದುರೆ  ಕಾಲಾಳು
ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು
ಹೊರಟ ಹೊರಟೇ ಹೊರಟ, ಹೊರಟನೆತ್ತೋ
ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ !

ಕಾಮ - ಕ್ರೋಧವ ದಾಟಿ, ಮದ - ಮತ್ಸರವ ತುಳಿದು
ಮೋಹ - ಲಾಭವ ಮೆಟ್ಟಿ ಅಡಿ ಕಿತ್ತಿ ಇಟ್ಟ,
ಇದೊ ತಗ್ಗು, ಅದೊ ಗುಡ್ಡ, ಆಗೋ ಮಲೆಯ ಬೆಟ್ಟ
ನೆಲ ತೆಳಗೆ ಬಿಟ್ಟ.

ಏರಿದೆರಿದನೇರಿ ಗಾಳಿಗುದುರೆ ಸವಾರಿ
ಚಂದ್ರಕಿರಣವ ಮೀರಿ ಸೂರ್ಯ ಸೇರಿ
ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು
ಅಸ್ಪರ್ಶ ಅವಕಾಶದಲ್ಲಿ ಇದ್ದ.
ಬುದ್ಧ-ಬುದ್ಧ-ಬುದ್ಧ
ಶಬ್ದ-ನಾದ-ದ್ವನಿಯ ಸದ್ದ ಮೀರಿದ್ದ.
ಇಲ್ಲ ಎಂಬುವ ಕೊನೆಗೆ ಆತ್ಮ ಶುದ್ದ
ಇದ್ದರೆನಿಲದಿದ್ದರೇನೆನಲು ಗೆದ್ದ.

ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ
ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ
ಗೆದ್ದುದೇನೆಂದೆನುತ ಮರಳಿ ಜಿಗಿದ
ಭೂತಜಾತದ ಎದೆಯ ಸೀಳಿ ಸಿಗಿದ
ಅದೇ ತನ್ನ ಮನೆಯಂದು ಸಿದ್ಧ ಬಗೆದ.

ಬುದ್ಧನೆಂಬುವ ಒಬ್ಬ ಎಂದೊ ಇದ್ದ
ಎನುವಂತೆ ಇಂದಿಗೂ ಇಲ್ಲೇ ಇಲ್ಲ
ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು
ಇದ್ದು ಇಲ್ಲದ ಹಾಗೆ, ಹಾಗೆ ಇತ್ತು.
ಬುದ್ಧ ಸತ್ತನು ಎಂದು ಯಾರೆಂದರೂ
ಬುದ್ಧನ ಜಯಂತಿಗಿದೆ ಜಯವೆಂದಿಗೂ
ಬುದ್ಧನ ಸಮಾಧಿಯದು ಮಾನವನ ಹೃದಯ
ಅದುವೆ ಕಾಯುತ್ತಲಿದೆ ಕಲ್ಕಿ ಉದಯ.

                                         - ದ ರಾ ಬೇಂದ್ರೆ
 ('ಗಂಗಾವತರಣ' ಕವನ ಸಂಕಲನದಿಂದ)

ದೀಪಾವಳಿ


ಹೂವು ಬಳ್ಳಿಗೆ ದೀಪ ;
ಹಸಿರು ಬಯಲಿಗೆ ದೀಪ ;
ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ;
ಮುತ್ತು ಕಡಲಿಗೆ ದೀಪ,
ಹಕ್ಕಿ ಗಾಳಿಗೆ ದೀಪ,
ಗ್ರಹತಾರೆಗಳ ದೀಪ ಬಾನಿನಲ್ಲಿ.

ಬಲ್ಮೆ ತೋಳಿಗೆ ದೀಪ ;
ದುಡಿಮೆ ಬೆವರಿನ ದೀಪ ;
ಸಹನೆ ಅನುಭವ - ದೀಪ ಬದುಕಿನಲ್ಲಿ ;
ಮುನಿಸು ಒಲವಿಗೆ ದೀಪ ;
ಉಣಿಸು ಒಡಲಿಗೆ ದೀಪ ;
ಕರುಣೆ ನಂದಾದೀಪ ಲೋಕದಲ್ಲಿ.

ತೋರಣದ ತಳಿರಲ್ಲಿ,
ಹೊಸಿಲ ಹಣತೆಗಳಲ್ಲಿ,
ಬಾಣಬಿರುಸುಗಳಲ್ಲಿ ನಲಿವು ಮೂಡಿ,
ಕತ್ತಲೆಯ ಪುಟಗಳಲಿ
ಬೆಳಕಿನಕ್ಷರಗಳಲಿ,
ದೀಪಗಳ ಸಂದೇಶ ಥಳಥಳಿಸಲಿ !

ಬೆಳಕಿನಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿಬರಲಿ !
ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ !

                  - ಕೆ ಎಸ್ ನರಸಿಂಹಸ್ವಾಮಿ
('ನವ ಪಲ್ಲವ' ಕವನ ಸಂಕಲನದಿಂದ) 

ಮೆರವಣಿಗೆ

http://chestofbooks.com/travel/india/John-Stoddard-Lectures/images/The-Procession-Of-The-Sacred-Tooth.png


ಹೊಸಿಲ ಹಸೆಯನು ದಾಟಿ, ಗೆಜ್ಜೆಗಳ ಕುಣಿಸಿ
ಒಳಗೆ ಬಂದಳು ನಾಲ್ಕು ತುಂಬಿರದ ಹುಡುಗಿ;
'ಮಾವ ಮೇಜಿನ ಮೇಲೆ ಇರುವುದೇನೆಂದು 
ಓರೆಗಣ್ಣಿನಲವಳು ನನ್ನ ಕೇಳಿದಳು.

"ಅದೊಂದು ಹಳೆಯ ಕಥೆ ; ಹೆಸರು ಮೆರವಣಿಗೆ.
ಓದುವೆನು ಕೇಳೆಂದು ಪುಸ್ತಕವನು ತೆರೆದೆ :
"ಹಸಿರು ದೀಪದ ಒಂಟೆ ಕಾಣಿಸಿತು ಮೊದಲು,
ಬೀದಿಯುದ್ದಕು ದೀಪಮಾಲೆಗಳು ಹೊಳೆದು.

ನೌಪತ್ತು ಕೇಳಿಸಿತು, ಗುಡುಗಿತು ನಗಾರಿ
ಕಿಕ್ಕಿರಿದ ಇಕ್ಕೆಲದ ಚಪ್ಪಾಳೆಗಳಲಿ;
ಬಳಿಕ ಆನೆಯ ಬಂಡಿ, ಕುದುರೆ, ಕಾಲಾಳು,
ಹಾಡುತ್ತ ಮುನ್ನಡೆದ ಗಾಯಕರ ಸಾಲು.

ಬಂತು ಓಲಗದೊಡನೆ ಬಳಕುತ್ತ ಮೇನ ;
ತಂಗಾಳಿಯಲಿ ತೇಲಿಬಂತು ತಿಲ್ಲಾನ."
'ಮುಂದೇನು ಬಂತೆಂದು ಕೇಳಿದಳು ಚೆಲುವೆ ;
"ಒಂದೆರಡು ಮಳೆಯ ಹನಿ ಬಿತ್ತೆಂದು ನುಡಿದೆ.

"ಸೊಂಡಿಲಾಡಿಸಿ ಬಂತು ಸಿಂಗರಿಸಿದಾನೆ ;
ಮಹಡಿಯಂಚಿಗೆ ಸರಿದು ನೋಡಿದೆನು ನಾನೆ.
ಚಿನ್ನದಂಬಾರಿಯಲಿ ದೊರೆ ಬಂದ, ಬಂದ!-
ಉಕ್ಕಿದುದು ಎಲ್ಲರೆದೆಯೊಳಗೆ ಆನಂದ.

ಇಲ್ಲಿಗಿದು ಮುಗಿತೆಂದವನೆ ವಿರಮಿಸಿದೆ ;
ಅರ್ಥವಾಯಿತೆ ಇವಳಿಗೆಂದು ಶಂಕಿಸಿದೆ.
ಒಂಟೆ, ಆನೆ, ಕುದುರೆ - ಇವಳಿಗೂ ಗೊತ್ತು;
ನಮ್ಮೂರಿಗೊಮ್ಮೆ ಸರ್ಕಸ್ಸು ಬಂದಿತ್ತು.

ಇವಳಿಗೋಲಗ ಕೂಡ ಅಪರಿಚಿತವಲ್ಲ ;
ಅಕ್ಕನ ಮದುವೆಗಿವಳು ಹೋಗಿದ್ದಳಲ್ಲ!
ಗೊತ್ತಿರದ ಪದಗಳಿವು : ಗಾಯಕ, ನಗಾರಿ,
ನೌಪತ್ತು, ಮೇನ, ತಿಲ್ಲಾನ, ಅಂಬಾರಿ.

ಪದಗಳ ಬಿಡಿಸಿ ಅರ್ಥವನು ವಿವರಿಸಿದೆ ;
ಸ್ಪಷ್ಟವಾಗಿರಬಹುದು ಎಂದು ಭಾವಿಸಿದೆ ;
ಇವಳ ಹಿಂದೆಯೆ ನಡೆದೆ ಬಾಗಿಲಿನವರೆಗೆ.-
'ದೊರೆ' ಎಂದರೇನೆಂದು ಕೇಳಿದಳು ಕಡೆಗೆ.

                  - ಕೆ ಎಸ್ ನರಸಿಂಹಸ್ವಾಮಿ
         ('ನವ ಪಲ್ಲವ' ಕವನ ಸಂಕಲನದಿಂದ)  
 

ಋತು ವೈಭವ

          
     
ಮುನ್ನುಡಿ

ಕಳೆದ ಕಾಲ, ಇರುಳ ಕಾಲ, ಬರುವ ಕಾಲ, ಕಾಲ:
ವರುಷಕಾರು ಋತುಗಳೆಂದು ನುಡಿಯುತಿಹನು ಬಾಲ.
ಒಂದು ಋತುವಿಗೊಂದು ರೂಪ, ರಾಗ, ಭಾವ , ತಾಳ ;
ಒಂದೆ ಹೊಳೆಯ ನೀರಿನಲ್ಲಿ ಬೇರೆ ಬೇರೆ ಆಳ.

ಕಾಲಚಕ್ರ ಉರುಳುತಿದೆ, ಗಾಳಿ ಮೊರೆದು ಹೊರಳುತಿದೆ ;
ಗೆಜ್ಜೆಸದ್ದು ಹೆಜ್ಜೆನೆರಳು ದಾರಿಯುದ್ದಕೂ.
ಅರ್ಧ ಸುಖ, ಅರ್ಧ ದುಖಃ, ಬಾನ ಕಡೆಗೆ ತೆರೆದೆ ಮುಖ ;
ತಾಯ ಸೆರಗ ಹಿಡಿದ ಕಂದ ದಾರಿಯುದ್ದಕೂ.

ಬಾಳ ತೊಡೆಕು ಬೆಳೆಯುತಿದೆ, ಗೆಲುವಿನಲ್ಲಿ ಹರುಷವಿದೆ :
ಚಕ್ರ ತಿರುಗಿದಂತೆ ವರುಷ ದಾರಿಯುದ್ದಕೂ.
ಋತುಗಳಾರು ಪುಟಗಳಾರು ವರುಷವೆಂಬ ಕವಿತೆಗೆನೆ
ಬೇರೆ ರಾಗ ಬೇರೆ ತಾಳ ದಾರಿಯುದ್ದಕೂ.

ಬೆಟ್ಟ ನಿಂತು ನೋಡುತಿದೆ, ಹರಿವ ನೀರು ಹಾಡುತಿದೆ;
ಎಲೆಯ ಮರೆಯ ಹಕ್ಕಿಯಿಂಪು ದಾರಿಯುದ್ದಕೂ.
ಸಾವಿರಾರು ಹೂವ ಬಣ್ಣ, ಸಂಜೆಯ ಮುಗಿಲಿನೆದೆಯ ಚಿನ್ನ,
ತಾರೆಗಣ್ಣ ಬೆಳಕ ರನ್ನ ದಾರಿಯುದ್ದಕೂ.

ವಸಂತ

ಪರಿಮಳದ ತಂಗಾಳಿ ಹರಿದಾಡಿತು;
ದುಂಬಿಗಳ ಸಂಗೀತ ಮೊದಲಾಯಿತು:
ಬಿರಿದರಳ ಬಣ್ಣಗಳ ಹೊಳೆ ಹರಿಯಿತು;
ಚೈತ್ರ, ವೈಶಾಖ-ವಸಂತ ಋತು.

ಮೃದು ವಸಂತದ ಮುದ್ದು ಬೆರಳು ಮೊಗ್ಗಿನ ಕಣ್ಣ
ತೆರೆದು ಅರಳಾಗಿಸುವ ವೇಳೆಯಲ್ಲಿ
ಎಳಬಿಸಿಲ ಹೊದಿಕೆಯಲಿ ನಗಲು ಚಿಗುರಿದ ತೋಟ
ಬಗೆಬಗೆಯ ಪರಿಮಳದ ಜ್ವಾಲೆಯಲ್ಲಿ,

ತಿಂಗಳೊಂದರ ಹಿಂದೆ ಹಸಿರು ಪತ್ತಲವುಟ್ಟು
ಕಂಗಳಿಗೆ ತಂಪಾಗಿ ಹೊಳೆದ ಮಾವು
ಇಂದೇಕೊ ಕೋಪದಲಿ ಕೆಂಪಿನುಡುಗೆಯನುಟ್ಟು
ವಿರಹಾಗ್ನಿಯಂತೆ ಧಗಧಗಿಸುತಿರಲು,

ಮರದ ತುದಿಯಲ್ಲಿ ಕೋಗಿಲೆ ತಂಗಿ ಹಾಡುತ್ತ
ನಲಿವಿನೊಂದಿಗೆ ನೋವ ಬೆರೆಸುತಿರಲು,
ಹೂ ಮಗುವಿನುಸಿರಂತೆ ಮೆಲುನಡೆಯ ತಂಬೆಲರು
ಹಸಿದ ಬಡವನ ಕಣ್ಣನೊರಸುತಿರಲು,

ಓ ಒಲವೆ, ನಿನ್ನ ವರ್ಷೋದಯದ ಗೀತವನು
ಕೇಳುವೆನು ಮೈಮರೆತು ನೆರಳಿನಲ್ಲಿ ;
ಹೂವ ಬಳಸುವ ದುಂಬಿದನಿಯನನುಕರಿಸುವೆನು
ಕಾಡ ಬಿದಿರಿನ ನನ್ನ ಕೊಳಲಿನಲ್ಲಿ :

ಮೃದು ವಸಂತವೆ, ನೆಲದ ಹೃದಯ ಚಿಮ್ಮಿದ ಒಲವೆ,
ಹೊಸ ವರುಷ ತೆರೆದ ತಳಿರಿನ ಬಾಗಿಲೆ, -
ಕೊರೆವ ಚಳಿಯೂ ಇರದ, ಉರಿವ ಬಿಸಿಲೂ ಇರದ
ಹರುಷವೇ, ನನ್ನೊಲವೆ, ಬಾಳ ಚೆಲುವೆ !

ಗ್ರೀಷ್ಮ

ಸಿರಿವಸಂತದ ಚೆಲುವು ಕಳೆಗುಂದಿತು ;
ಉಸಿಬಿಸಿಲು ನಿಟ್ಟುಸಿರ ಕದ ತೆರೆಯಿತು ;
ಬಿಸಿ ಗಾಳಿ ಬೀದಿಯಲಿ ಸಂಚರಿಸಿತು;
ಜ್ಯೇಷ್ಠ ಆಷಾಢ-ಗ್ರೀಷ್ಮ ಋತು.

ಬೆಸಗೆಯಲ್ಲಿ ನಡುಹಗಲಿನ ಬಿಸಿಯುಸಿರಿಗೆ ಬಳಲಿ
ಗಿಡದಲ್ಲಿಯೆ ಬರಿದಾಗಿದೆ ದಳವಿರದ ಗುಲಾಬಿ ;
ಕೆರೆಯೊಣಗಿದೆ, ಕೆಸರಾಗಿದೆ ; ಕಂಗೆಟ್ಟಿವೆ ಮೀನು ;
ಮಾತಾಡಿದೆ ನೋಡುತ್ತಿದೆ ತುಟಿಯಿಲ್ಲದ ಬಾನು.

ದನಕರುಗಳು ತಲೆಯೆತ್ತಿವೆ ಮೇವಿಗೆ ಎಲ್ಲೆಲ್ಲು ;
ಬರಿಗಾಳಿಗೆ ತಲೆ ಹಾಸಿದೆ ಹಸಿರಿಲ್ಲದ ಹುಲ್ಲು ;
ಗಿಳಿ ಕೋಗಿಲೆ ಹಾಡಿದರೂ ತಲೆದೂಗದ ಬಾಳು ;
ಬಂಡೆಯ ಹಣೆಗೇರುತ್ತಿದೆ ಬಂಡಿಯ ಕೆಂಧೂಳು.

ಬತ್ತಿದ ಹೊಳೆ ; ಅದರಾಚೆಗೆ ತಿರುಗುತ್ತಿದೆ ಗಾಣ ;
ಮೇಲೆತ್ತಿದ ಚಾಟಿಯಲಿದೆ ಮುದಿಯೆತ್ತಿನ ಪ್ರಾಣ ;
ನಡುಬೇಸಗೆ ಹಗಲಾಗಿದೆ ಬಿಸಿಲಿನ ಅಸಿಧಾರೆ ;
ಇರುಳುದ್ದಕು ನೇಯುತ್ತಿದೆ ಬರಿಗನಸಿನ ಸೀರೆ.

ಜನಜೀವನ ಸಾಗುತ್ತಿದೆ ಉರಿಬಿಸಿಲನು ತಾಳಿ;
ವೀಣೆಯ ದನಿಯಾಳದಲೂ ಮದ್ದಳೆಯನು ಕೇಳಿ.
ಕರುಣೆಯ ಮಾತಾಡುವರೇ ಎಲ್ಲರು ಎಲ್ಲೆಲ್ಲು!
ಎಲೆಯುದುರಿದ ಮರವಿದ್ದರೆ ಅದರಡಿಯಲೆ ನಿಲ್ಲು !

ವರ್ಷ

ಬಾನ ಕಣ್ಣಿನ ತುಂಬ ನೀರಾಡಿತು ;
ಮನೆಮನೆಯ ಬಾಗಿಲನು ಮಳೆ ತಟ್ಟಿತು ;
ಉತ್ತ ಮಣ್ಣಿನ ಕನಸು ಕೆನೆಗಟ್ಟಿತು;
ಶ್ರಾವಣ ಭಾದ್ರಪದ-ವರ್ಷ ಋತು

ಮುಗಿಲು ಕಟ್ಟಿತು, ತೊಡೆಯ ತಟ್ಟಿತು,
ಗುಡುಗಿನೊಂದಿಗೆ ಮಿಂಚಿತು.
ಪುಟ್ಟ ಕಂದನ ಕೆನ್ನೆಯದುರಿತು,
ತಾಯ ಸೆರಗನು ಹಿಡಿಯಿತು.

ದೂರಗಿರಿಗಳ ತಲೆಯ ತುಳಿಯುತ ಓಡಿಬರುತಿಹ ಮುಗಿಲಿಗೆ
ಘೋರವಾದ್ಯದ ತಂತಿ ಮಿಡಿಯುವ ಹೃದಯದಾಳದ ಬಯಕೆಗೆ
ಮುಗಿಲ ಹಿಂಡಿನ ಹರಿತ ಕೊಂಬಿನ ಜೋರು ಕಾಳಗ ನಡೆಯಿತು ;
ಭಾರವಾಗಿಹ ಮುಗಿಲು ಕೆಚ್ಚಲು ಮನೆಯ ಚಾವಣಿಗಿಳಿಯಿತು.

ಹನಿಯ ತುಂಬಿದ ಗಾಳಿ ಬೀಸಿತು, ಕಿವಿಗೆ ರೊಯ್ಯನೆ ನುಗ್ಗಿತು.
ಬೆಳದ ತೆಂಗಿನ ಜಂಬವಡಗಿತು ; ತೋಟ ಭೂಮಿಗೆ ಬಗ್ಗಿತು.
ಧೂಳನೆಬ್ಬಿಸಿ ಗಾಳಿ ಬೀಸಿತು, ದಿಕ್ಕುದಿಕ್ಕಿಗೆ ಅಲೆಯಿತು.
ಧಾರೆಧಾರೆಗಳಾಗಿ ಸೋರಿದ ನೀರು ನೆಲವನು ತೊಳೆಯಿತು.

ತೊಳೆದ ಕನ್ನಡಿಯಂಥ ಬೀದಿಯ
ದೀಪ ತಣ್ಣಗೆ ಹೊಳೆಯಿತು ;
ಲೋಕ ಹುಟ್ಟಿತು ಮೊದಲ ಬೆಳಗಿನ
ಮೊದಲ ಕಳೆಯನು ನೆನೆಯಿತು.

ಶರತ್

ರಾತ್ರಿ ಕನ್ನಡಿಯಂತೆ ಕೋರೈಸಿತು ;
ನಕ್ಷತ್ರಗಳ ಕಣ್ಣು ಥಳಥಳಿಸಿತು ;
ಚಂದಿರನ ತುಂಬುನಗೆ ತಂಪೆರೆಯಿತು ;
ಆಶ್ವಯುಜ ಕಾರ್ತಿಕ-ಶರದೃತು.

ಶರತ್ ಕಾಲವೇ ಋತುಗಳ ರಾಣಿ, ತಾರಾಮಣಿವೇಣಿ,
ಇಂದ್ರನೀಲ ನೀಲಾಂಬರಧಾರಿಣಿ, ಕವಿಗಣದಭಿಮಾನಿ,
ಪುಷ್ಪರಹಿತ ಉದ್ಯಾನದ ಧ್ಯಾನದ ಹೃದಯದ ಅಧಿದೇವಿ,
ಹಸಿರೆಲೆಯಂಚಿಗೆ ಅರಿಸಿನ ಚೆಲ್ಲಿದ ಮಂಗಳ ವನದೇವಿ.

ಮೇರೆಯಿರದ ಮುಗಿಲಿಲ್ಲದ ನೀಲದ ತಾರಾಧೂಳಿಯಲಿ
ತಿಂಗಳ ಬೆಳಕಿನ ತಂಪನು ಹರಡುವ ಕುಡಿನೋಟವ ಬೀರಿ
ಧೂಳಿಲ್ಲದ ಹೂವಿಲ್ಲದ ಬಯಲಿನ ಶಾಂತಿ ಸೆರಗಿನಲಿ
ಹರುಷದಿಂದ ತುಳುಕಾಡುವ ಕಂಗಳ ಮೌನದ ಬೆಡಗಿನಲಿ

'ಕಣ್ಣ ತೊಳೆವೆ, ಕಾಡಿಗೆಯನು ಹಚ್ಚುವೆ ಮಂಕು ಹರಿಯಲೆ'ಂದು,
'ಚೆಲುವ ಬಾಳ ಕಾಣಿಸುವೆನು ಈಗಲೆ ಒಳಗೆ ಬನ್ನಿರೆ'ಂದು,
ಹಾದಿ ಬೀದಿಯಲಿ ಬಂದಳು ಹಾಡುತ ಶಾರದೆ, ಬಂಗಾರಿ.
ತೂಗುವ ಹಳದಿಯ ತೆನೆಗಳ ಮಿಡಿಯುತ ಋತುಗಳ ಸಿಂಗಾರಿ.

ಹೇಮಂತ, ಶಶಿರ

ಮಾರ್ಗಶಿರ ಪುಷ್ಪ - ಹೇಮಂತ ಋತು ;
ಹಿಮ ಸುರಿವ ಹಾದಿಯಲಿ ಬೆಳಗಾಯಿತು.
ಮಾಘ ಫಾಲ್ಗುಣ - ಶಿಶಿರ ಋತು;
ಕಂಬಳಿಯ ಹೊದ್ದರೂ ಮೈ ನಡುಗಿತು.

ಹೇಮಂತದ ಚಳಿಗಾಳಿಗಳೇ,
ಜೀವಕೆ ನಡುಕವ ತಾರದಿರಿ.
ಹಗೆಯೊಲು ಕೆಂಗಣ್ ತೆರೆಯದಿರಿ.
ಸಮರೋತ್ಸಾಹವ ತಳೆಯದಿರಿ.

ಹೇಮಂತದ ಚಳಿಗಾಳಿಗಳೇ,
ಹರಿತದ ಬಾಣವ ಹೂಡದಿರಿ.
ಎಲ್ಲವ ಗೆಲ್ಲುವ ದುಡುಕಿನಲಿ
ಸಾವಿನ ಗೀತವ ಹಾಡದಿರಿ.

ಮಾಗಿಯ ಮಂಜಿನ ಮುಸುಕುಗಳೇ,
ಕಣ್ಣಿಗೆ ಮೋಸವ ಮಾಡವಿರಿ.
ತರುಲತೆಗಳ ಜೀವಾಳವನೆ
ಹಿಡಿದಲ್ಲಾಡಿಸಿ ನೋಡುವಿರಿ.

ಶಿಶಿರದ ನಿರ್ಜಲ ನೋಟಗಳು
ಕಣ್ಣಿಗೆ ಅಯ್ಯೋ ಎನಿಸುವುವು.
ಕೊರೆಯುವ ಚಳಿಯಲಿ ನಿಂತವನು
ಎಡ ಬಲ ನೋಡಲು ಹೆದರುವನು.

ಚಳಿಗಾಲದ ಬಿಳಿ ಬಾನಿನಲಿ
ಚಂದಿರ ಮಂಕಾಗಲೆಯುವನು.
ಬೆಚ್ಚನೆ ಮೂಲೆಯ ಹಿಡಿದವನು
ಮುಗಿಯದ ಕತೆಯನು ಹೇಳುವನು.

ಹಿನ್ನುಡಿ

ಮೃದು ವಸಂತ ಮುಗಿಯಿತೆನಲು
ಗ್ರೀಷ್ಮ ಬಂದೆನೆನುವುದು.
ಗ್ರೀಷ್ಮದುರಿಯು ನಂದಿತೆನಲು
ವರ್ಷ ನುಗ್ಗಿ ಬರುವುದು.

ಮಳೆಯ ಹಿಂದೆ ಶರತ್ಕಾಲ
ಬಿಳಿಯ ಹೆಜ್ಜೆಯಿಡುವುದು.
ಹೇಮಂತದ ಹಿಂದೆ ಶಿಶಿರ;
ಕಾಲ ವೀಣೆ ಮಿಡಿವುದು.
         - ಕೆ ಎಸ್ ನರಸಿಂಹಸ್ವಾಮಿ
('ತೆರೆದ ಬಾಗಿಲು' ಕವನ ಸಂಕಲನದಿಂದ)

ಚಂದ್ರೋದಯ

ಚಿತ್ರ ಕೃಪೆ: cptprocrastination.tumblr.com

ಅದೊ ನೋಡು! ಓ ಅಲ್ಲಿ, ಪೂರ್ವದ ದಿಗಂತದಲಿ
ಹೊನ್ನಿನುರಿ ಹೊತ್ತುತಿದೆ ಮುಗಿಲಿನಲ್ಲಿ!
ಕಡೆದ ಕೆಂಗೆಂಡವೆಂಬಂತೆ ರಾರಾಜಿಪನು
ಚಂದ್ರನಾಕಾಶದ ಲಲಾಟದಲ್ಲಿ.
ಏನು ಮೌನವಿದೇನು ಶಾಂತಿಯಿದು! ಬಾನಿನಲಿ,
ಮುಗಿಲಿನಲಿ, ನೆಲದಲ್ಲಿ, ಕೆರೆಯ ಮೇಲೆ
ಹಾಲಿನಲಿ ಚಿನ್ನವನೆ ತೇದು ಲೇಪಿಸಿದಂತೆ
ಶೋಭಿಸಿದೆ ಬೆಳ್ದಿಂಗಳಮೃತ ಲೀಲೆ!
ಶಿವಶಿವಾ! ಮನುಜಕೃತ ಕಲೆಯಾವುದಿದಕೆ ಸಾಟಿ?
ರಾಜಧಾನಿಯು ತನ್ನ ಕೃತಕತೆಗೆ ತಾನೆ ನಾಚಿ
ಮೊಗಬಾಡುತಿದೆ! ಮಿಂಚು ಸೊಡರುಗಳು ಕೋಟಿ ಕೋಟಿ
ಮಿಣುಮಿಣುಕಲೇನಂತೆ? ರಾಕಾ ಶಶಾಂಕ ರೋಚಿ
ಎಲ್ಲವನು ಮುಳುಗಿಸಿದೆ! ಏನಿದು, ಅಜಾತವಾದಿ?
ಜಾಗ್ರತವೊ? ಸ್ವಪ್ನವೊ? ಸುಷುಪ್ತಿಯೋ? – ಇದು ಸಮಾಧಿ!

                              - ಕುವೆಂಪು

ರಾಷ್ಟ್ರೀಯ ವಿಷಮತೆ

ಉದುರುತಿವೆ ಹಣ್ಣೆಲೆಗಳೊಂದಾದ ಮೇಲೊಂದು;
ಬಂದಂತೆ ತೋರುತಿದೆ ನಮ್ಮ ನಾಡಿಗೆ ಮಾಗಿ.
ಹೆಪ್ಪುಗಡುತಿಹುದೆದೆಯ ಕೆನ್ನೀರು ಚಳಿ ತಾಗಿ;
ಸುಕ್ಕು ತೋರುತಿದೆ ಮುಖದಲ್ಲಿ. ಕುಳಿರಲಿ ಮಿಂದು
ಯುವಕ ತರು ವೃಂದವೂ ಮೃತವಾದವೊಲು ನಿಂದು
ಆಸೆಗೆ ನಿರಾಸೆಯನೆ ನೀಡುತಿದೆ. ಚಳಿ ಹೋಗಿ,
ಬಿಸಿಯ ಬಿಸಿಲೈತಂದು, ಮುದದಿ ಕೋಗಿಲೆ ಕೂಗಿ,
ಮೃದುಲ ಪಲ್ಲವ ನವ್ಯ ದಿವ್ಯಚೇತನ ಸಿಂಧು
ಮಧು ಮಹಾತ್ಮನು ತಾನು ಎಂದಿಗೈತಂದೆಮಗೆ
ಮತ್ತೆ ಮೊದಲಿನ ನೆಚ್ಚು ಕೆಚ್ಚುಗಳನೆದೆಗಿತ್ತು
ಸಲಹುವನೊ ಎಂದಳುಕಿ, ಬೇಸತ್ತು ತಮತಮಗೆ
ಉತ್ಸಾಹ ಹೀನರಾಗದಿರಿ: ಏಕೆನೆ, ಬಿತ್ತು
ಲಯವಾಗುವುದೆ ಮೊಳಕೆಗಾಯುಸ್ಸು. ಮುನ್ನುಗ್ಗಿ,
ತಳಿರುಗಳೆ, ಕಾಯುತಿದೆ ನಿಮಗಾಗಿ ಹೊಸಸುಗ್ಗಿ!

                                   -  ಕುವೆಂಪು

ಷೋಡಶಿ


ಷೋಡಶ ವಸಂತಗಳು ಸುಯ್ದಾನವಂ ಮಾಡಿ
ಕರುವಿಟ್ಟ ಲಾವಣ್ಯ ಲಕ್ಷ್ಮಿಯೆನೆ, ಸುಂದರಿಯೆ,
ಕಂಗೊಳಿಪೆ. ಜೀವನದ ಮಧುಕುಂಜಮಂಜರಿಯೆ,
ಕೂರ್ಮೆತೆಂಗಾಳಿಯಲಿ ನಲಿವ ನಿನ್ನನು ನೋಡಿ
ಹೃದಯದ ನಿರಾಕಾರ ಸ್ವಪ್ನಗಳು ಮೈಮೂಡಿ
ನುಡಿದೋರುತಿವೆ. – ಅವುಗಳರ್ಥವೇನೆಂದರಿಯೆ.
ಉದಯಗಿರಿ ಫಣೆಯಲ್ಲಿ ಪೂರ್ಣಚಂದ್ರನು ಮೆರೆಯೆ
ಯಾಮಿನಿಯು ಬಣ್ಣಬಣ್ಣದ ಮುಗಿಲ್ಗಳನು ಸೂಡಿ
ಕರೆವಂತೆ ಮೋಹಿಸಿಹೆ, ಓ ನನ್ನ ಸವಿಗಣಸೆ!
ನನ್ನಸಲ್ಲ! – ಹೇ ಸ್ವಪ್ನ ಸುಂದರಿಯೆ, ನೀನಂದು
ಮರ್ತ್ಯವನ್ನುಳಿದು ಹಾ ಸ್ವರ್ಗವಾದವಳಿಂದು
ಕನಸಿನಲಿ ಚುಂಬಿಸಿಹೆ! – ಅಯ್ಯೋ, ಕನಸು ಕನಸೆ? -
ಆದರಿದೊ, ಹಾಡುತಿದೆ ದಿನಮುಖದ ಕಾಜಾಣ:
ಬೆಂದೆದೆಗೆ ವಿಸ್ಮೃತಿಯ ಗಾಯನ ಸುರಾಪಾನ!

                            - ಕುವೆಂಪು
             ('ಕೃತ್ತಿಕೆ' ಕವನ ಸಂಕಲನದಿಂದ)

ಧರ್ಮ


ಓ ಮನೋಹರ ಭಯಂಕರ ವಿಧಾಯಕ ಮೂರ್ತಿ,
ಪುರುಷೋತ್ತಮನ ಸನಾತನ ನಿತ್ಯ ಸಹಯೋಗಿ,
ಹೇ ವಿಧಾತನ ವಾಣಿಯೇ, ಭಕ್ತಿಯಲಿ ಬಾಗಿ
ನಿನಗೆರಗುವೆನು. ಹೊರಗೆ ಪ್ರಕೃತಿನಿಯಮಸ್ಫೂರ್ತಿ
ನೀನು; ನನ್ನೆದೆಯ ಮಣೆಯಲಿ ನೀತಿಯಂದದಲಿ
ಮಂಡಿಸಿಹೆ. ಶಶಿ ಸೂರ್ಯ ತಾರೆಗಳು ನಿನಗಳ್ಕಿ
ತಪ್ಪದೆಯೆ ನಡೆಯುವರು ಪಥನಿಷ್ಠೆಯಲಿ; ಸಿಲ್ಕಿ
ನಿನ್ನ ರುದ್ರಾಧಿಕಾರದ ವಜ್ರಬಂಧದಲಿ
ಬೆಂಕಿಯುರಿಯುತಲಿಹುದು; ಬೀಸುತಿರುವುದು ಗಾಳಿ;
ಮೋಡ ಮಳೆ ಸಿಡಿಲು ಮಿಂಚುಗಳೆಲ್ಲವೂ ಕರ್ಮ
ಚಕ್ರದಲಿ ಸುತ್ತುತಿವೆ. ನಿನ್ನ ವಾಣಿಯ ಕೇಳಿ
ಸೆಡೆತುಕೊಂಡಿದೆ ನರನ ಹೀನತೆಯು. ಓ ಧರ್ಮ,
ನಿನ್ನನೊಲಿವುದೆ ಭಕ್ತಿ; ನೀನಾಗುವುದೆ ಶಕ್ತಿ;
ನಿನ್ನ ಕೈಂಕರ್ಯದಿಂ ನಿನ್ನ ಗೆಲುವುದೆ ಮುಕ್ತಿ!

                             -  ಕುವೆಂಪು

ಕವನಗಳೆ ಮಂತ್ರಗಳು

ಕವನ ಪರ್ವತಧಾತ್ರಿ; ಕವನ ನೀಲಾಂಭೋಧಿ: ಕವನ ನೀಲಾಂಬರಂ;

ಕವನಗಳೆ ಮಂತ್ರಗಳು ರಸಯೋಗಿ ಋಷಿಕವಿಗೆ;
ಕವನಗಳೆ ದೇವಾಲಯಂ. ಕವನಗಳೆ ಪಾತ್ರೆ
ಕುಸುಮಾನುಭವಗಳಿಗೆ; ತೀರ್ಥಗಳಮೃತಯಾತ್ರೆ
ಕವನ ಪಠನಂ. ಕವನಗಳೆ ವೇದಮನುಭವಿಗೆ!
ಕವನ ರಚನೆಯೆ ಪೂಜೆ; ಕವನ ಗಾನವೆ ಭಕ್ತಿ.
ಕವನ ಮಂತ್ರದಿ ಸೃಷ್ಟಿ, ಕವನ ಮಂತ್ರದಿ ಲಯಂ;
ದೇವ ದೇವ ಪ್ರಾಣಕಂಪನ ರಸಾಲಯಂ!
ಕವನಗಳೆ ಭುಕ್ತಿ ಮೇಣತ್ಯಂತ ಸುಖಮುಕ್ತಿ!
ಕವನ ಕಾನನ ಪಂಕ್ತಿ; ಕವನ ಪರ್ವತಧಾತ್ರಿ;
ಕವನ ನೀಲಾಂಭೋಧಿ: ಕವನ ನೀಲಾಂಬರಂ;
ಕವನ ರವಿ; ಕವನ ಶಶಿ; ಕವನ ತಾರಾರಾತ್ರಿ;
ಕವನ ಶಿವನುನ್ಮಾದ ತಾಂಡವಾಡಂಬರಂ! -
ಪಾಂಡಿತ್ಯದರ್ಥಫಣಿಗಿದು ಕಾವ್ಯಗರುಡಮಣಿ:
ಕವಿಗೊರ್ವನಿಗೆ ಸಾಧ್ಯ; ಕವಿಗೊರ್ವನಿಗೆ ವೇದ್ಯ!

                                -  ಕುವೆಂಪು
            ('ಕೃತ್ತಿಕೆ' ಕವನ ಸಂಕಲನದಿಂದ)

ನಿನ್ನ ಪ್ರೀತಿಗೆ


ನಿನ್ನ ಪ್ರೀತಿಗೆ, ಅದರ ರೀತಿಗೆ
ಕಣ್ಣ ಹನಿಗಳೆ ಕಾಣಿಕೆ ?
ಹೊನ್ನ ಚಂದಿರ, ನೀಲಿ ತಾರಗೆ
ಹೊಂದಲಾರದ ಹೋಲಿಕೆ.

ನಿನ್ನ ಪ್ರೀತಿಗೆ, ಅದರ ರೀತಿಗೆ
ಚೆಲುವು ಕನಸಿನ ಜವನಿಕೆ ;
ಬೆಳ್ಳಿನಿದ್ದೆಯ ತುಟಿಗಳಂಚಿಗೆ
ಸುಳಿದ ಕಿರುನಗೆ ತೋರಿಕೆ.

ತುಂಬಿ ಕೊರೆದಿಹ ಹೂವಿನೆದೆಯಲಿ
ನೋವು ಗಾಳಿಗೆ ಹಾಸಿಗೆ ;
ಜೇನು ಜೀವದ ನೆಳಲ ಪೊದೆಯಲಿ
ಗೂಡುಕಟ್ಟಿದೆ ಆಸೆಗೆ.

ತಂತಿಯಾಚೆಗೆ ವೀಣೆ ಮಿಂಚಿದೆ
ಬೆಂಕಿಬೆರಳಿನ ಹಾಡಿಗೆ ;
ನಿಟ್ಟುಸಿರ ಪಲ್ಲವಿ ಬೇಲಿಯಾಗಿದೆ
ಚಿಂತೆಯಾಳುವ ಕಾಡಿಗೆ.

ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ ;
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ.

ನೂರು ಕನ್ನಡಿಗಳಲಿ ಕಂಡೆನು
ನೋಡಬಾರದ ಮುಖವನು ;
ಇಳಿದ ಮುಖದಿಂಗಿತವನರಿತೆನು
ಅಸುಖ ಮುದ್ರಿತ ಸುಖವನು.

ನಗದ ಮುಖದಲಿ ನಿನ್ನ ಕಂಡೆನು
ತಿಳಿದ ಬಾನಿನ ಹರಹನು,
ಮೊದಲ ಮೋಹದ ಮಂಜು ಕದಲಲು
ಬದುಕು ತುಂಬಿದ ಹಗಲನು.

ನಿನ್ನ ಪ್ರೀತಿಗೆ, ಅದರ ರೀತಿಗೆ
ನೀಡಬಲ್ಲೆನೆ ಕಾಣಿಕೆ ?
ಕಾಲವಳಿಸದ ನೆಲದ ಚೆಲುವಿಗೆ
ನಿನ್ನ ಪ್ರೀತಿಯೆ ಹೋಲಿಕೆ.

          - ಕೆ ಎಸ್ ನರಸಿಂಹಸ್ವಾಮಿ
('ಮನೆಯಿಂದ ಮನೆಗೆ'  ಕವನ  ಸಂಕಲನದಿಂದ)

ಬೆಳಗಾಗುವುದೇ ಬೇಡ!


ಹುಣ್ಣಿಮೆ ಬಾನಿನ ಕೆನ್ನೆಯ ಮೇಲೆ
ಪೂರ್ಣ ಚಂದಿರ ಬಂದಿತ್ತು ;
ಅದರ ಕೆಳಗೆ, ಎಲ್ಲೋ ಬಲು ಕೆಳಗೆ,
ರೋಹಿಣಿ ಹೊಳೆದಿತ್ತು.

ಒಸಗೆಯ ಕೋಣೆಯ ಮಂಚದ ಮೇಲೆ
ಕುಳಿತಿದ್ದವು ಗಂಡು ಹೆಣ್ಣು ;
ಸುತ್ತಲು ಬಗೆ ಬಗೆ ತಿನಿಸು, ಹಣ್ಣು,
ಹೂವಿನ ನರುಗಂಪು.

ತೆರೆದ ಕಿಟಕಿಯಿಂದೊಳಗೆ ಬಂದಿತ್ತು
ಮೆಲ್ಲಗೆ ತಂಬೆಲರು ;
ಗಂಡಿಗೆ ಒರಗಿದ ಹೆಣ್ಣು ಹೇಳಿತು -
'ಸುಖಮಯವೀ ಬದುಕು'.

ಕಿಟಕಿಯ ತುಂಬಾ ಚಂದಿರ, ತಾರಗೆ
ದೂರದಿ ಯಾವೂದೊ ಹಾಡು ;
ಮುತ್ತಿಕ್ಕುತ ಗಂಡಿಗೆ ಅದು ನುಡಿಯಿತು -
'ಚಂದಿರನಂತೀ ಬದುಕು'.

ಚಂದಿರನಡಿಯಲಿ ಚಲಿಸಿತು ಮೋಡ,
ಹೊಳೆಯಿತು ತಾರಗೆ ಎಲ್ಲೆಲ್ಲು ;
ಹೆಣ್ಣು ಹೇಳಿತು ಸಂತಸದಿಂದ -
'ಬೆಳಗಾಗುವುದೇ ಬೇಡ!'

        -  ಕೆ ಎಸ್ ನರಸಿಂಹಸ್ವಾಮಿ
('ಮೌನದಲಿ ಮಾತ ಹುಡುಕುತ್ತ' ಕವನ ಸಂಕಲನದಿಂದ)

ನಾನು ಕವಿಯಲ್ಲ


ನನ್ನ ಕೃತಿ ಕಲೆಯಲ್ಲ;
ನಾನು ಕವಿಯಲ್ಲ.
ಕಲೆಗಾಗಿ ಕಲೆಯೆಂಬ 
ಹೊಳ್ಳು ನೆಲೆಯಿಲ್ಲ.

ಮೆಚ್ಚುಗೆಯೆ ನನಗೆ ಕೊಲೆ;
ಬದುಕುವುದೆ ನನಗೆ ಬೆಲೆ.
ಸಾಧನೆಯ ಛಾಯೆ ಕಲೆ;
ವಿಶ್ವಾತ್ಮವದಕೆ ನೆಲೆ.
ನಿನಗದು ಚಮತ್ಕಾರ;
ನನಗೊ ಸಾಕ್ಷಾತ್ಕಾರ!
ಮೌನದಿಂದನುಭವಿಸು:
           ಕೋ ನಮಸ್ಕಾರ!
ಕಲೆಯೆಂದು ಹೊಗಳುವೊಡೆ:
           ಕೋಟಿ ಧಿಕ್ಕಾರ!
                                - ಕುವೆಂಪು 
   ( 'ಕೋಗಿಲೆ ಮತ್ತು ಸೋವಿಯತ್ ರಷ್ಯ' ಕವನಸಂಕಲನದಿಂದ )

ಅಸ್ತವ್ಯಸ್ತ



ನೀನು ಅರಳಿದ ಮೊಗ್ಗು, ಹಕ್ಕಿ ಹಾಡಿನ ಇಂಪು
ನಕ್ಷತ್ರಗಳ ಚೆಲ್ಲಿ ಹೋದ ಕವಿತೆ ;
ನಿದ್ದೆಯೂ ನೀನೆ, ಕನಸೂ ನೀನೆ ಇರುಳಿನಲಿ
ಅರ್ಥವಾಗದು ನನಗೆ ನಿನ್ನ ಪ್ರಶ್ನೆ.

ಹಸಿದ ಮಕ್ಕಳ ಕಣ್ಣನೀರು ನಿನ್ನಯ ಕವಿತೆ,
ಉಸಿರು ಕಟ್ಟುವೆ ಏಕೆ ಅದನು ಕೇಳಿ;
'ನೀರ ಬೆರಸದೆ ಹಾಲು ಮಾರುವುದೆ'? ಎನ್ನುವೆಯ,
ಅಂಥವರು ನಿನಗೆಲ್ಲಿ ಸಿಕ್ಕಬಹುದು ?

ನೀರು ಬೆರೆಸಿದ ಹಾಲು ಕುಡಿದು ಬೆಳೆದಿದೆ ಕಂದ,
ನೀರು ಬೆರಸದ ಹಾಲು ನಿನ್ನ ಕವಿತೆ ;
ಟೀಕೆ ಟಿಪ್ಪಣಿಗಳಿಗೆ ಬಲಿದೂರ ನೆಲಸಿಹುದು,
ತಂಬೆಲರ ನುಡಿಯಲ್ಲು ಅರ್ಥವಿರಬಹುದು.

ಬರಿಮೈಯ ಹೆಣ್ಣು ಪೀತಾಂಬರದ ಗೀತವನು
ಹಾಡುತ್ತ ಬರುತಿಹಳು ಬೀದಿಯಲ್ಲಿ ;
ಬದುಕು ಅಸ್ತವ್ಯಸ್ತ ; ಗುರಿ ದಾರಿಗಳ ನಡುವೆ
ಕಂದಕಗಳಿರುವುದನು ನಾನು ಬಲ್ಲೆ.

ನಿನ್ನ ತೂಕಡಿಕೆಯನು ನಾನೀಗ ಕಂಡಿಹೆನು,
ನಿನ್ನ ಕೋಣೆಗೆ ಹೋಗಿ ಮಲಗು ನಲ್ಲೆ!

         - ಕೆ ಎಸ್ ನರಸಿಂಹಸ್ವಾಮಿ

ಸರ್ವಜಿತು


ಕೆರೆ ತುಂಬಿ ಹಳ್ಳಕಾಲುವೆಗಳಲಿ ನೀರೋಡಿ
ಮೇಡು ಬನ ಬಯಲು ಬಾಳೆಲ್ಲ ಹಚ್ಚಗೆ ಹಾಡಿ
ಗಿಡಬಳ್ಳಿ ಹೂಮುಡಿದು ಹೆಣ್ಣ ಹೊರೆಯಲಿ ಬಳಲಿ
ಶಾಂತಿಯಲಿ ನಾಡು ನಗಲಿ !
ಗುಡ್ಡ ಗುಡಿಗೋಪುರದ ಗಂಟೆಗಳ ಹಿರಿದನಿಗೆ
ಒಲಿದು ಕೈ ಮುಗಿದು ನಾಡೆಲ್ಲ ತಿಳಿಬಾನೆದೆಗೆ
ಹರಕೆಯನು ಹೊರಲಿ, ಸಂತೋಷ ತನ್ನೊಳಗುಡಿಗೆ
ನುಗ್ಗಿಬರಲೆಂದು ಬೆಳಕಾಗಿ !
ಸರ್ವಜಿತು ಸಕಲ ಲೋಕದ ಚರಾಚರ ಜೀವ
ವರ್ಗವರ್ಗಾಂತರಗಳೆಲ್ಲ ಸೋದರಭಾವ
ಸೌಖ್ಯಸಂತೃಪ್ತಿ ಧೀರೋತ್ಸಾಹಮಾರ್ಗದಲಿ
ಹೆಜ್ಜೆಯಿಡಲೆಂದು, ಸ್ವರ್ಗದ ಕನಸು ಭೂಮಿಯಲಿ
ತುಂಬಿಕೊಳಲೆಂದು ಹರಸಲಿ ! ತನ್ನ ಕಾಲದಲಿ
ಉನ್ನತಿಗೆ ನಾಡ ನಡಸಲಿ !

           - ಕೆ ಎಸ್ ನರಸಿಂಹಸ್ವಾಮಿ
('ಉಂಗುರ' ಕವನ ಸಂಕಲನದಿಂದ)

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!




ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ನಿಂತರೆ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಓದಿದರೆ ಹೇಳುವರು ಮತ್ತೊಮ್ಮೆ ಬರೆಯೊ
ಬರೆದಿಡಲು ಬೆದಕುವರು ಬರವಣಿಗೆ ಸರಿಯೋ
ಇವರ ಬಯಕೆಗಳೇನೋ ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

                       - ಕೆ ಎಸ್ ನರಸಿಂಹಸ್ವಾಮಿ

ಹಿನ್ನುಡಿ


ಅದೂ ಬೇಕು ಇದೂ ಬೇಕು
ಎಲ್ಲವೂ ಬೇಕು ನನಗೆ.
ದಾರಿ ನೂರಾರಿವೆ ಬೆಳಕಿನರಮನೆಗೆ!
ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ;
ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ.
ನಾ ಬಲ್ಲೆ, ಇವು ಎಲ್ಲ ಏರುವೆಯ
ಒಂದೊಂದು ಹಂತ.
ನೂರಾರು ಭಾವದ ಬಾವಿ; ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ.
ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ?
ನಮಗೆ ಬೇಕಾದದ್ದು ದಾಹ ಪರಿಹಾರ.

            - ಜಿ ಎಸ್ ಶಿವರುದ್ರಪ್ಪ
   ("ದೀಪದ ಹೆಜ್ಜೆ" ಕವನಸಂಕಲನದಿಂದ)

ಆಕಾಶದ ಹೆಬ್ಬಯಲಿನಲಿ


ಆಕಾಶದ ಹೆಬ್ಬಯಲಿನಲಿ
ಬೆಚ್ಚನೆ ಬಿಸಿಲಿನಲಿ
ಚಳಿಕಾಯುತ್ತಿವೆ
ಅಲೆಯುತ್ತಿವೆ
ಸುತ್ತುತ್ತಿವೆ
ಬಿಳಿ ಮುಗಿಲಿನ ಮುಂದೆ
ಹಿಂದೆ ಮುಂದೆ!
ನನ್ನಿಳೆಯೀ ಹಸುರ್ಬಯಲೀ
ಎಳೆ ಗರುಕೆಯ ಹಾಸಿನಲಿ
ಚಲಿಸದವೊಲೆ ಚಲಿಸುತ್ತಿವೆ
ಮೇಯುತ್ತಿಹ ಗೋವು!
ಮೃದುಗಾಳಿಯು ಬೀಸುತ್ತಿರೆ
ಹರೆಹರೆಯಲಿ ತಳಿರೆಲೆಯಲಿ
ಮರ್ಮರ ದನಿಗೈಯುತ್ತಿದೆ
ಎಲೆ ತುಂಬಿದ ಮಾವು
ಹೊಸ ಹಸಲೆಯ ಹಸುರೆದೆಯಲಿ
ಮುದ್ದಾಗಿಹ ಬಿಳಿ ಕುರಿಮರಿ
ನೆಗೆಯುತ್ತಿರೆ ಚಿಗಿಯುತ್ತಿರೆ,
ಕಂಠದೊಳಿಹ ಕಿಂಕಿಣಿಯೂ
ಟಿಂಟಿಣಿ ಟಿಣಿ ಟಿಂಟಿಣಿ ಟಿಣಿ
ಸಂತೋಷವ ಘೋಷಿಸುತಿರೆ
ಸುಖವಲ್ಲವೆ?-ಪೇಳಲ್ಲವೆ
ಈ ಬಾಳಿನ ನೋವೂ?
ಎಲ್ಲೆಲ್ಲಿಯು ಯಾರಲ್ಲಿಯು
ಉದ್ವೇಗವೆ ಇಲ್ಲ;
ಸೂಸುತ್ತಿದೆ ಹರಿಯುತ್ತಿದೆ
ತುಂಬುತ್ತಿದೆ ತುಳುಕುತ್ತಿದೆ
ಬಾಳಿನ ಜೇನ್ಬೆಲ್ಲ!
ಎಲ್ಲವು ‘ಇವೆ’! ಸುಮ್ಮನೆ ‘ಇವೆ’!
ಅರಿಯುವ ಗೋಜಿಲ್ಲ!
ಮನುಜನು ನಾನ್ ಎನ್ನೆದೆಯಲಿ
ಅರಿವೆಂಬುವ ಬಾವು
ಕೀವಾಗಿರೆ ನೋವಾಗಿರೆ
ಬಾಳ್ಬೆಲ್ಲವೆ ಬೇವು!

             - ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)

ಗುರು

ಚಿತ್ರ ಕೃಪೆ: The Hindu

ಸಂಪಗೆ ಹೂವನು ಸಂಪಗೆ ಹೂವೆಂ–
ದೇತಕೆ ಕರೆವರು ಹೇಳಮ್ಮಾ!–
ಹಿಂದಿನ ಜನರದಕಾ ಹೆಸರಿಟ್ಟರು,
ಸಂಪಗೆ ಎನ್ನುವೆವದರಿಂದ.–
ಬೇರೆಯ ಹೆಸರುಗಳಾಗಿನ ಜನರಿಗೆ
ತಿಳಿದಿರಲಿಲ್ಲವೆ ಏನಮ್ಮಾ?
ಸಂಪಗೆಗಿಂತಲು ತಂಪಿಗೆ ಎಂದಿರೆ
ಇಂಪಾಗಿರುವುದು ಕೇಳ್ವರಿಗೆ.
ಜನರೇನಮ್ಮಾ, ಹಿಂದಿನದೆಂದರೆ
ಕಂಗಳ ಮುಚ್ಚಿಯೆ ಪೂಜಿಪರು.
ನನ್ನೀ ಸಲಹೆಯನಾದರೂ ಕೇಳರು,
ತಂಗಿಯ ಒಬ್ಬಳೆ ಒಪ್ಪಿಹಳು.
ಕಾಳಗೆ ಹೇಳಿದೆ, ಜಟ್ಟುಗೆ ಹೇಳಿದೆ,
ತಿಮ್ಮಗೆ ದಿನ ದಿನ ಬೋಧಿಸಿದೆ.
ಎಲ್ಲಾ ಸಂಪಗೆ ಸಂಪಗೆ ಎಂಬರು;
ತಂಪಿಗೆ ಎನ್ನುವರಾಗಿಲ್ಲ!
ನಾನೂ ತಂಗಿಯು ತಂಪಿಗೆ ಎಂಬೆವು,
ನೀನೂ ತಂಪಿಗೆ ಎನ್ನಮ್ಮಾ ! –
ಆಗಲಿ! ನಾನೂ ತಂಪಿಗೆ ಎಂಬೆನು:
ನನಗೂ ತಂಗಿಗು ನೀನೆ ಗುರು!

                   -  ಕುವೆಂಪು
  ('ನನ್ನ ಮನೆ' ಕವನ ಸಂಕಲನದಿಂದ)

ಶಕ್ತಿಯ ಕೊಡು


ಶಕ್ತಿಯ ಕೊಡು, ಶಕ್ತಿಯ ಕೊಡು,
ಶಕ್ತಿಯ ಕೊಡು ಹೇ ಪ್ರಭೂ.
ಸತ್ಯಕಾಗಿ ನಿಲುವ ಛಲವ
ದೀಪ್ತಗೊಳಿಸು ನನ್ನೊಳು.

ಎಡರ ಕಡಲ ತೆರೆ ಹೆಡೆಗಳು
ಭೋರ್ಗರೆಯುತ ಬಂದರೂ
ತಡೆದು ನಿಲುವ ಮಳಲ ತಡಿಯ
ಬಲವ ನೀಡು ಶ್ರೀ ಗುರೂ.

ನೂರುಲ್ಕೆಯ ರಭಸ ಮತಿಯ
ಅಬ್ಬರಗಳ ನಡುವೆಯೂ
ನಿಯತ ಗತಿಯ ತಾರಗೆಯೊಲು
ನೇರವಿರಿಸು ನನ್ನನು.

ಗುಡುಗು ಸಿಡಿಲ್ ಮಿಂಚಿನಾಚೆ
ಅಚಂಚಲದ ನೀಲಿಗೆ
ಸದಾ ತುಡಿವ ಗರುಡಗತಿಯ
ತುಂಬು ನನ್ನ ಹೃದಯಕೆ.

             -  ಜಿ ಎಸ್ ಶಿವರುದ್ರಪ್ಪ
  ('ಕಾರ್ತೀಕ' ಕವನ ಸಂಕಲನದಿಂದ)

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?


ಯಾವ  ಕಾಲದ  ಶಾಸ್ತ್ರವೇನು ಹೇಳಿದರೇನು ?
ಎದೆಯ  ದನಿಗೂ  ಮಿಗಿಲು  ಶಾಸ್ತ್ರವಿಹುದೇನು ?
ಎಂದೋ  ಮನು  ಬರೆದಿಟ್ಟುದಿಂದೆಮಗೆ  ಕಟ್ಟೇನು ?
ನಿನ್ನೆದೆಯ  ದನಿಯೆ ಋಷಿ ! ಮನು ನಿನಗೆ ನೀನು !

ನೀರಡಿಸಿ ಬಂದ  ಸೋದರಗೆ ನೀರನು ಕೊಡಲು 
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ  ಕಂಬನಿಯನೊರಸಿ  ಸಂತೈಸುವೊಡೆ 
ಶಾಸ್ತ್ರ  ಪ್ರಮಾಣವದಕಿರಲೆ  ಬೇಕೇನು ?

ಪಂಚಮರ  ಶಿಶುವೊಂದು  ಕೆರೆಯಲ್ಲಿ  ಮುಳುಗುತಿರೆ 
ದಡದಲ್ಲಿ  ಮಿಯುತ್ತ  ನಿಂತಿರುವ  ನಾನು 
ಮುಟ್ಟಿದರೆ  ಬ್ರಹ್ಮತ್ವ   ಕೆಟ್ಟುಹೋಗುವುದೆಂದು 
ಸುಮ್ಮನಿದ್ದರೆ  ಶಾಸ್ತ್ರಸಮ್ಮತವದೇನು?

ಅಂತು  ಮನು  ತಾನು  ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ  ಸುತ್ತಿ,
ಸ್ವರ್ಗ  ಹೋಗಲಿ, ಮತ್ತೆ ನರಕ  ಬಂದರು ಬರಲಿ,
ಎದೆಯ  ಧೈರ್ಯವ  ಮಾಡಿ ಬಿಸುಡಾಚೆಗೆತ್ತಿ!

ಸ್ವರ್ಗ  ಹೋಗುವುದಿಲ್ಲ, ನರಕ  ಬರುವುದು ಇಲ್ಲ;
ಸ್ವರ್ಗ  ನರಕಗಳೇನು  ಶಾಸ್ತ್ರಸ್ಥವಲ್ಲ .
ಎದೆಯ  ದನಿ  ಧರ್ಮನಿಧಿ ! ಕರ್ತವ್ಯವದುವೆ  ವಿಧಿ !
ನಂಬದನು; ಅದನುಳಿದು  ಋಷಿಯು  ಬೇರಿಲ್ಲ!

ಹಿಂದಿನಾ  ಋಷಿಗಳೂ  ಮಾನವರೆ  ನಮ್ಮಂತೆ,
ಅವರ  ಶಾಸ್ತ್ರವು  ಅವರ  ಕಾಲಕ್ಕೆ  ಮಾತ್ರ;
ಕಾಲಕ್ಕೆ  ತಕ್ಕಂತೆ, ದೇಶಕ್ಕೆ  ತಕ್ಕಂತೆ,
ನಮ್ಮ  ಹೃದಯವೆ  ನಮೆಗೆ  ಶ್ರೀಧರ್ಮಸೂತ್ರ  !


                                                 - ಕುವೆಂಪು 
                 ( 'ಕೋಗಿಲೆ  ಮತ್ತು  ಸೋವಿಯಟ್  ರಷ್ಯ' ಕವನಸಂಕಲನದಿಂದ )

ನೀತಿಬೋಧೆ


ಸಾಕು ಬಿಡು, ನೀತಿಯನು ಹೇಳದಿರು: "ಬೀಳದಿರು" 
         ಎಂದೆಲ್ಲರಂತೆ ನಾನಾಡಬಲ್ಲೆ.
ಪರಮಾತ್ಮನೆಲ್ಲೆಲ್ಲಿಯಡಗಿರುವನೆಂಬುದನು 
         ನೀ ಹೇಳಬೇಕೆ? ನಾನದನು ಬಲ್ಲೆ. 
ಜಗದೀಶನೆಲ್ಲವನು ನೋಡುತಿಹನೆಂಬುದದು 
         ಹೊಸತಲ್ಲ, ಹಳೆಯ ನುಡಿ, ಕೇಳಿಬಲ್ಲೆ!
ನೀತಿಯಲಿ ಪರಮಸು ವಿಹುದೆಂದು ನಾ ಬಲ್ಲೆ;
        ಆದರೆದೆಯಳುಕುತಿರೆ ನಿಲ್ಲಲಾರೆ!

ಮುಗ್ಗರಿಸಿ ಬೀಳುತಿರಲೆತ್ತುವಿಯೋ ಹೇಳು ನೀನು?
ನನ್ನೆದೆಗೆ ಶಕ್ತಿಯೊಂದನು ಸುರಿಯಬಲ್ಲೆಯೇನು?
ಹಾಗಲ್ಲದಿರೆ ಬರಿದೆ "ಬೀಳದಿರು" ಎನಲು ನೀನು
ಬಿದ್ದವರ ಗುಂಪಿನಲಿ ಸೇರಿಸುವೆ ನಿನ್ನ ನಾನು!

                                           - ಕುವೆಂಪು 
             ( 'ಹೊನ್ನ ಹೊತ್ತಾರೆ' ಕವನ ಸಂಕಲನದಿಂದ)  

ಸತ್ಯ ಮತ್ತು ಸೌಂದರ್ಯ

ಹೂವಿನ ಸೊಬಗನು ನೋಡುತ ನೀನು 
       ಕೋಮಲವೆನ್ನುತ ಮುತ್ತಿಡುವೆ;
ಹೂವಿನ ಪೆಂಪಿಗೆ ಬಾಳನು ಕೊಟ್ಟಾ
       ಮೊಳಕೆಯ ಗೋಳನು ನೀನರಿಯೆ!

ಬುವಿಯನು ನೋಡುತ ಸೊಬಗಿಗೆ ಮೆಚ್ಚಿ,
       ಕವಿಯೇ, ಕವಿತೆಯ ವಿರಚಿಸುವೆ;                    
ಬುವಿಯಾನಂದಕೆ ಜೀವವನಿತ್ತಾ 
       ಕರ್ತನ ವೆದನೆಯರಿತಿಹೆಯ?

ಯುಗ ಯುಗ ಯುಗಗಳ ಯಾತನೆಯಿಂದ 
        ಜನಿಸಿತು ನಲಿವೀ ಬ್ರಹ್ಮಾಂಡ;
ನಲಿಯುವ ಒಂದೊಂದಲರಿನ ಹೃದಯದಿ 
        ಬ್ರಹ್ಮವು ಮೌನದಿ ನರಳುತಿದೆ!

ಮುಂದಕೆ ನೋಡುವ ಕವಿಗಳ ಕಣ್ಣಿಗೆ 
        ಬ್ರಹ್ಮವು ಹರ್ಷದಿ ಕುಣಿಯುತಿದೆ;
ಹಿಂದಕೆ ನೋಡುವ ಋಷಿಗಳ ಕಣ್ಣಿಗೆ 
        ಯಾತನೆಯಿಂದದು ಹೊರಳುತಿದೆ!
                                     - ಕುವೆಂಪು 
                      ( 'ಕೊಳಲು' ಕವನ ಸಂಕಲನದಿಂದ )ಸತ್ಯ 

ಕಳಚಿ ಬೀಳುವೆನಯ್ಯಾ

ಕಳಚಿ  ಬೀಳುವೆನಯ್ಯಾ  ನಿನ್ನ ಸಿರಿಯಡಿಗೆ 
ಕಳಚಿ ಬೀಳುವೆನಯ್ಯಾ.

ತಣ್ಣೆಲರು ಬೀಸಿಬರೆ ಕರ್ಮವನು ಕಳೆದಿರುವ
ಹಣ್ಣೆಲೆಯು ಹೆತ್ತ ತಾಯ್ಮರವನಗಲಿ,
ಮುಳಿಯದೆಯೆ, ಹಳಿಯದೆಯೆ, ಮೌನದಲಿ, ದೈನ್ಯದಲಿ,
ಕಳಚಿ ತೊಟ್ಟುಳಿದು ನೆಲಕುದುರುವಂತೆ!       

ಜೀವನದ ತುದಿಯಲ್ಲಿ ಕೊಟ್ಟ ಕಾರ್ಯವನೆಸಗಿ 
ದೇವನೊಲ್ಮೆಯ ನಂಬಿ ಶಾಂತಿಯಿಂದ,
ಹಂಬಲಿಸಿ ಸವಿಯೊಲ್ಮೆಗಳುವ ಹೆಣ್ಣಿನ ಕಣ್ಣ 
ಕಂಬನಿಯು ಮಾತಿಲ್ಲದುರುಳುವಂತೆ 

                                          - ಕುವೆಂಪು 
                          ( 'ಕೊಳಲು' ಕವನ ಸಂಕಲನದಿಂದ )
 
 

ನಾವು ಬರತೇವಿನ್ನ......


              ೧

ನಾವು ಬರತೇವಿನ್ನ ನೆನಪಿರಲಿ ತಾಯಿ
ನಂ ನಮಸ್ಕಾರ ನಿಮಗ,
ಕಾಯ್ದಿರಿ—ಕೂಸಿನ್ಹಾಂಗ ನಮಗ—
ನಾವು ಬರತೇವಿನ್ನ

ಜಗದ ಕೂಡ ಬಂದೆವು ಜಗಳಾಡಿ
ಕೊಟ್ಟಿರಿ ನಿಮ್ಮ ತೊಡಿ
ಅಲ್ಲಿ ನಿದ್ದಿ ಮಾಡಿ—ಎದ್ದೆವೀಗ
ಯಾವುದೋ ಹೊಸಾ ನಸುಕಿನ್ಯಾಗs |

ನೀವು ತಾಯಿತನ ನಡಿಸಿದರಿ
ಹಾಲ ಕುಡಿಸಿದರಿ
ಮರಳು ಆಡಿಸಿದರಿ ಕನಸಿನ್ಯಾಗ
ಬೆಳಗು—ಆತು ಭಾಳ ಬ್ಯಾಗ

ಕಣ್ಣು ಮುಚ್ಚಿಕೊಳ್ಳತಾವ ಚಿಕ್ಕಿ
ಚಿವುಗುಡತಾವ ಹಕ್ಕಿ
ಕತ್ತಲಿ ತಲಿಕುಕ್ಕಿ—ಬಾನಮ್ಯಾಗ
ಬೆಳಕು—ಹಾರ್ಯಾವ ಮೂಡಲದಾಗ

ನಿಮ್ಮ ಸೆರಗ ಮರೀ ಮಾಡಿದಿರಿ
ಲಾಲಿ ಹಾಡಿದಿರಿ
ಆಟ ಆಡಿದಿರಿ—ಏನೋ ಹಾಂಗs
ಮರೆತೆವು—ಕಳೆದ ಜನ್ಮಧಾಂಗ

ಜೋಲಿ—ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು—ಲೋಕದಾಗ ?
ನಾವು -- ಮರತೇವದನ ಹ್ಯಾಂಗ ?

ಅಕ್ಕ—ತಂಗಿ—ಮಗಳು –ಹಡೆದ ತಾಯಿ…
ಕನ್ನಿ—ಗೆಳತಿ—ಮಡದಿ—ದಾಯಿ—ಸಾಕುದಾಯಿ…
ಜೋಡೆ—ಸೂಳೆ ಮತ್ತೆ ಮಾಯಿ—ವಿಧೀಮಾಯಿ…

ನೂರಾರು ವೇಷ ಕಳಿಸಿದಿರಿ
ಮಡ್ಡ ಇಳಿಸಿದಿರಿ
ಮಾನ ಬೆಳಿಸಿದಿರಿ

ಯಾಕೋ ಕರುಣ ಬಂತು ತಮಗs
ನಾವು—ಶರಣ ಬರಲಿಲ್ಲ ಸುಮಗs

ನಾವು ಬರತೇವಿನ್ನ......

           ೨

ಎಲ್ಲಿ ಹೋದಲ್ಲಿರಲಿ ನಮ್ಮ ಹತ್ರ
ನಿಮ್ಮ ಕೃಪಾ ಛತ್ರ
ಕಾರ್ಯ ಸುಸೂತ್ರ—ನಡೀತಿರಲಿ
ನಿಮ್ಮ—ಹೆಜ್ಜೆ ಜೋಡಿಗಿರಲಿ

ಹಗಲಾಗಲಿ ಧುರಂಧುರಿ ಜಾತ್ರಿ
ನಿದ್ದಿಗಿರಲಿ ರಾತ್ರಿ
ಜೀವಕ್ಕs ಖಾತ್ರಿ—ನಿಮ್ಮದಿರಲಿ
ಜನ್ಮ ಮರಣ, ಏನs ಬರಲಿ

ಮಾಡೀತೇನು ಮಣ್ಣಿನs ಗೊಂಬಿ ?
ನಿಮ್ಮ ಹೆಸರ ನಂಬಿ
ಹೊತ್ತುಕೊಂಡು ಕಂಬಿ—ಕುಣಿಯುತಿರಲಿ
ಸ್ವರ್ಗ—ನರಕ ಯಾವುದೂ ಇರಲಿ ?

ಮೂರು ಹೊತ್ತಿನ್ಯಾಗ ನಿಮ್ಮ ಧ್ಯಾನ
ಹೊತ್ತುತಿರಲಿ ಗ್ಯಾನ
ಸುಡಲಿ ಅಜ್ಞಾನ-ಪ್ರೇಮ ಮುರಲಿ
ಕಿವಿಗೆ ಅದೇ ಕೇಳಸತಿರಲಿ.

ನಿಮ್ಮ ಚಂದ್ರ ಜ್ಯೋತಿಯಾ ಬೆಳಕು
ಅದs ನಮಗ ಬೇಕು
ಸುಡೋ ಸೂರ್ಯ ಸಾಕು—ಯಾಕ ತರಲಿ ?
ಹೊತ್ತಾರ ಯಾರು ಒಣಾ ಹರಲಿ !

ಕತ್ತಲೀ ಕೆಚ್ಚ ಕೆದರೀ—ಕೆಚ್ಚಿ ಕೆದರಿ !
ಬಣ್ಣ ಬಣ್ಣ ಬಂತು ಚೆದರಿ—ಸುತ್ತ ಚೆದರಿ
ಮಕ್ಕಳಾಟ ತೋರಿಸಿದಿರಿ—ಹಾರಿಸಿದಿರಿ.

ನಿಮ್ಮ ಹೊಟ್ಟೀ ಕರುಳಿನಾ ತುಣುಕು
ಅಂತನs ಚುಣುಕು
ತೋರಿಸಿದಿರಿ ಮಿಣುಕು

ಮಿಣುಮಿಣುಕು ದೀಪದಾಗ
ಚಿಕ್ಕೀ ಮಳೀ ಸುರಿಸಿದ್ಹಾಂಗ |

ನಾವು ಬರತೇವಿನ್ನ....

                         - ದ ರಾ ಬೇಂದ್ರೆ
      ('ಮೂರ್ತಿ ಮತ್ತು ಕಾಮಕಸ್ತೂರಿ' ಕವನ ಸಂಕಲನದಿಂದ)

ಜಡಿಮಳೆ


ಮುಸಲ ವರ್ಷ ಧಾರೆ
ಮುಗಿಲಿನಿಂದ ಸೋರೆ
ಕುಣಿವ ನವಿಲು ನನ್ನ ಮನಂ,
ನಲ್ಮೆಯುಕ್ಕಿ ಮೀರೆ!

ಹಸುರು ಬಯಲ ಮೇಲೆ
ಬಾಣ ಜಾಲದೋಲೆ
ಮಳೆಯ ಹನಿಗಳೆರಗಲೊಡಂ
ತುಂತುರಾವಿ ಲೀಲೆ!

ತಲೆಯ ಕೆದರಿ ಕಾಳಿ
ಕುಣಿವ ತರೆನ ತಾಳಿ
ಪವನ ಹರಿಯು ಗರ್ಜಿಸಿಹಂ
ವಿಪಿನ ಕರಿಯ ಸೀಳಿ!

ನೀರು, ನೀರು, ನೀರು!
ಕಾರುತಿಹುದು ಕಾರು!
ನೋಡುತಿರುವ ಕವಿ ನಯನಂ
‘ನಂದದಿಂದೆ ನೀರು’!

               - ಕುವೆಂಪು
('ಪಕ್ಷಿಕಾಶಿ' ಕವನ ಸಂಕಲನದಿಂದ)

ಹಣ


ಹಣವನು ಗಳಿಸೆಂದಣ್ಣನಿಗೆಲ್ಲರು ಬುದ್ಧಿಯ ಹೇಳುವರೇಕಮ್ಮಾ!

ಹಣವೆಂದರೆ ನಾವಾಡುವ ಮಣ್ಣಿನ ಪುಡಿಗಿಂತಲು ಚೆಲುವೇನಮ್ಮಾ?
ಧೂಳಿನಷ್ಟು ಅದು ನುಣ್ಣಗಿಹದೇ ಹೇಳಮ್ಮಾ?
ಧೂಳಿನಷ್ಟು ಅದು ಸಣ್ಣಗಿಹುದೇ ಹೇಳಮ್ಮಾ?
ಧೂಳಿಯಂತೆ ಅದು ಗಾಳಿಯಲ್ಲಿ ಹಾರಾಡಬಲ್ಲುದೇ ತಿಳಿಸಮ್ಮಾ?
ಧೂಳಿಯಂತೆ ಅದು ಹುಡುಗರೆಲ್ಲರನು ಒಲಿಯಬಲ್ಲುದೇ ಹೇಳಮ್ಮಾ?

ಬೆಳಗಿನ ನೇಸರಿನೆಳಬಿಸಿಲಿನ ಮುದ್ದನು ಹಣ ಮೀರಿಹುದೇನಮ್ಮಾ?
ಎಳೆಹಸುರಲಿ ದಿನವೂ ನಾವಾಯುವ ಹೂಗಳ ಮೀರಿಹುದೇನಮ್ಮಾ?
ಮಳೆಯ ಬಿಲ್ಲಿನೊಲು ಮನವ ಮೋಹಿಪುದೆ ಹೇಳಮ್ಮಾ?
ಮಳೆಯ ಹನಿಗಳೊಲು ನಮ್ಮ ಕುಣಿಸುವುದೆ ಹೇಳಮ್ಮಾ?
ಹನಿಯೊಳು ಮಿಂದಿಹ ತಳಿರಲಿ ನಲಿಯುವ ಹಿಮಮಣಿಗದು ಚಲುವೇನಮ್ಮಾ?
ತಳಿತಿಹ ಬನದಲಿ ಉಲಿಯುವ ಕೋಗಿಲೆಯಿಂಚರಕದು ಇಂಪೇನಮ್ಮಾ?

                                       - ಕುವೆಂಪು
                             ('ನನ್ನ ಮನೆ' ಕವನ ಸಂಕಲನದಿಂದ) 

ಕನಸಿನ ಕನಸು

ಕನಸಿನೊಳು ಸಂಚರಿಪ ಕನಸಯ್ಯ ನಾನು;
ನೀನದನು ಹಿಡಿದು ಬಂಧಿಸಿಡಲಾರೆ.
ಸಿಟ್ಟಿನಲಿ ಕುಟ್ಟಿದೊಡೆ ಪುಡಿಮಾಡಲಾರೆ;
         ಕನಸೆಂದು ಕನಸಯ್ಯ ತುದಿಯವರೆಗೆ!

ಕನಸಿನಂತೆನಗೆಲ್ಲ ತೋರಿತಿಹುದಯ್ಯ;
        ಮಾನವರು, ಹಕ್ಕಿಗಳು, ಮಿಗಗಳೆಲ್ಲ.
ಬೆಟ್ಟಗಳು ಕೂಡ ಕಾಣುವುವು ಕನಸಂತೆ;
        ಬಾಲರೆನಗಾಡುತಿಹ ಕನಸ ಮಾಲೆ.

ಕನಸೊಡೆದು ಬೇರೊಂದು ಕನಸಪ್ಪುದಯ್ಯ ಕಡೆಗೆ!
ಸಾವುಬಾಳುಗಳೇನು? ಕನಸಿನಿಂ ಕನಸಿನೆಡೆಗೆ 
ಹಾರುವುದೆ ಸಂಸಾರ! ನಾನಾರು? ಯಾವ ಮನಸೊ
ಕಾಣುತಿಹ ಕನಸಿನಲಿ ಸುಳಿದಲೆವ ಕಿರಿಯ ಕನಸೋ?


                                                 - ಕುವೆಂಪು 
                   ( 'ಹೊನ್ನ ಹೊತ್ತಾರೆ' ಕವನ ಸಂಕಲದಿಂದ )

ಅಷ್ಟು ಪ್ರೀತಿ ಇಷ್ಟು ಪ್ರೀತಿ


ಅಷ್ಟು ಪ್ರೀತಿ ಇಷ್ಟು ಪ್ರೀತಿ--
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು--
ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.

ಮುತ್ತಿನೆಕ್ಕಸರವನಿಕ್ಕೆ
ಮುದ್ದಿಗೆ ಕಳೆಕಟ್ಟಿತೆ ?
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು ತಟ್ಟಿತೆ ?
ಕುದಿದ ಬಂದ ಕಂಬನಿಯಲು
ಕಂಪು ಬರದೆ ಬಿಟ್ಟಿತೆ ?

ಮುತ್ತು ರತುನ ಹೊನ್ನು ಎಲ್ಲ
ಕಲ್ಲು ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ
ಒಂದು ಷೋಕು---ಬರಿಯ ಝೋಕು
ಬದುಕಿನೊಂದು ಜಂಬವು
ಒಲವೆ ಮೂಲ ಬಿಂಬವು.

ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕೊತ್ತಲು
ಸಿಂಹಾಸನವನೇರಿ ಕುಳಿತೆ ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?

ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಏನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?

                      - ದ ರಾ ಬೇಂದ್ರೆ
('ಸಖೀಗೀತ' ಕವನ ಸಂಕಲನದಿಂದ)

ಶಿಶು

ಚಿತ್ರ ಕೃಪೆ: http://pixdaus.com/single.php?id=194871
ಹಸುರಿನುಯ್ಯಾಲೆಯಲಿ
ಬಿಸಿಲು ತೂಗಾಡುತಿದೆ;
ಚುಕ್ಕಿಯುದ್ಯಾನದಲಿ
ಹಕ್ಕಿ ಹಾರಾಡುತಿದೆ;
ಒಡಲವೀಣೆಯ ನಡುವೆ
ನುಡಿಯಿಲ್ಲದಿಂಚರಕೆ
ಮೊದಲು ತೊದಲಿನ ತುಟಿಯ
ಕೆಂಪು ತೆರೆಯುತಿದೆ!
ಮೈವೆತ್ತ ಗಾನಕ್ಕೆ
ಸುಖರಸದ ತಾನಕ್ಕೆ
ತನ್ನ ಸಂತಾನಕ್ಕೆ
ಸೃಷ್ಟಿ ಮರೆಯುತಿದೆ!

                          - ಕುವೆಂಪು
('ಪ್ರೇಮ ಕಾಶ್ಮೀರ' ಕವನ ಸಂಕಲನದಿಂದ)

ದೇವರು ರುಜು ಮಾಡಿದನು


ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಗೆಸೆದಿರೆ
ಕಿಕ್ಕಿರಿದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು,
ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೊರಿತ್ತು.
ಹೂಬಿಸಿಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ್ತೊದಲು
ರಂಜಿಸ ಇಕ್ಕೆಲದಲಿ ಹೊಮ್ಮಳಲು
ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!

ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,
ಸೃಷ್ಟಿಯ ರಚನೆಯ ಕುಶಲತೆ ಚಂದಕೆ ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!

                             - ಕುವೆಂಪು
      ('ಪಕ್ಷಿಕಾಶಿ' ಕವನ ಸಂಕಲನದಿಂದ)

ಅನಂತ ಪ್ರಣಯ


ಉತ್ತರದ್ರುವದಿಂ ದಕ್ಷಿಣದ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ದಾರೆಯ ಮಸೆಯಿಸಿತು

ಅಕ್ಷಿನಮೀಲನ ಮಾಡದೆ
ನಕ್ಷತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ

                      - ದ ರಾ ಬೇಂದ್ರೆ
('ನಾದಲೀಲೆ' ಕವನ ಸಂಕಲನದಿಂದ)

ಅರ್ಧ ಚಂದ್ರ



ದೇವರ ಪೆಪ್ಪರಮೆಂಟೇನಮ್ಮಾ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟಮ್ಮಾ!

ದಿನದಿನ ನೋಡುವೆ, ದಿನವೂ ಕರಗುತ
ಎರಡೇ ವಾರದೊಳಳಿಯುವುದು!
ಮತ್ತದು ದಿನದಿನ ಹೆಚ್ಚುತ ಬಂದು
ಎರಡೇ ವಾರದಿ ಬೆಳೆಯುವುದು!

ಅಕ್ಷಯವಾಗಿಹ ಪೆಪ್ಪರಮೆಂಟದು
ನನಗೂ ದೊರಕುವುದೇನಮ್ಮಾ? –
ನೀನೂ ದೇವರ ಬಾಲಕನಾಗುಲು
ನಿನಗೂ ಕೊಡುವನು, ಕಂದಯ್ಯ! –

ದೇವರ ಬಾಕನಾಗಲು ಒಲ್ಲೆ:
ಆತನ ಮೀರಿಹೆ ನೀನಮ್ಮಾ!
ತಾಯಿಯನಗಲಿಸಿ ದೇವರ ಹಿಡಿಸುವ
ಪೆಪ್ಪರಮೆಂಟೂ ಬೇಡಮ್ಮಾ!                  
                        - ಕುವೆಂಪು
('ನನ್ನ ಮನೆ' ಕವನ ಸಂಕಲನದಿಂದ)

ಹೋಗುವೆನು ನಾ


ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕಾಡಿಗೆ!

ಬೇಸರಾಗಿದೆ ಬಯಲು ಸೀಮೆಯ ಬೋಳು ಬಯಲಿನ ಬಾಳಿದು.
ಬಿಸಿಲು, ಬೇಸಗೆ, ಬೀಸುವುರಿಸೆಕೆ; ತಾಳಲಾರದ ಗೋಳಿದು!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!

ಅಲ್ಲಿ ಇಂತಿರಬೇಕು, ಇಂತಿರಬಾರದೆಂಬುವುದಿಲ್ಲವೈ;
ಅಲ್ಲಿ ಹೊರೆ ಹೊಣೆಯಿಲ್ಲ; ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ;
ಜಾತಿಗೀತಿಯ ವೇದಭೇದದ ಕಟ್ಟುಕಟ್ಟಳೆ ನಿಲ್ಲದೈ:
ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ ಭೀತಿಯೆ ಸಲ್ಲದೈ!

ಅಲ್ಲಿ ತೆರೆತೆರೆಯದ್ರಿಪಂಕ್ತಿಗಳೆಲ್ಲೆ ಕಾಣದೆ ಹಬ್ಬಿವೆ:
ನಿಬಿಡ ಕಾನನರಾಜಿ ಗಿರಿಗಳನಪ್ಪಿ ಸುತ್ತಲು ತಬ್ಬಿವೆ.
ದೆಸೆಯ ಬಸವನ ಹಿಣಿಲ ಹೋಲಿವೆ; ಮುಗಿಲ ಚುಂಬನಗೈದಿವೆ
ತುಂಗ ಶೃಂಗಗಳಲ್ಲಿ; ದಿಕ್ತಟದಲ್ಲಿ ಸೊಂಡಿಲ ನೆಯ್ದಿವೆ!

ರವಿಯ ರಶ್ಮಿಯ ಪ್ರಜ್ಞೆಯಿಲ್ಲದ ವಿಪಿನ ನಿರ್ಜನ ರಂಗಕೆ,
ಮುಗಿಲನಂಡಲೆಯುತ್ತ ನಿಂತಿಹ ಧೀರ ಪರ್ವತ ಶೃಂಗಕೆ,
ವನ ವಿಹಂಗಸ್ವನ ತರಂಗಿತ ಪವನ ಪಾವನ ಸಂಗಕೆ,
ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ!

ಅಲ್ಲಿ ಇವೆ ಕಾಜಾಣ, ಕೋಗಿಲೆ, ತೇನೆ, ಗಿಳಿ, ಕಾಮಳ್ಳಿಯು;
ಕಂಪೆಸೆವ ಸೀತಾಳಿ, ಕೇದಗೆ, ಬಕುಳ, ಮಲ್ಲಿಗೆ ಬಳ್ಳಿಯು.
ನೀಲಿ ಬಾನಲಿ; ಹಸುರು ನೆಲದಲಿ; ಕಂಗಳೆರಡನೆ ಬಲ್ಲವು:
ಅಲ್ಲಿ ಸಗ್ಗವೆ ಸೂರೆ ಹೋಗಿದೆ; ನಂದನವೆ ನಾಡೆಲ್ಲವು!

ನೆಳಲುಗತ್ತಲೆ ತೀವಿದಡವಿಯ ಹೊದರು ಹಳುವಿನ ಸರಲಲಿ
ಹುಲಿಯ ಗರ್ಜನೆ, ಹಂದಿಯಾರ್ಭಟೆ; ಕಾಡುಕೋಳಿಯ ಚೀರುಲಿ:
ದೊಡ್ಡು, ಕಡ, ಮಿಗ, ಮುಸಿಯ, ಕೋಡಗ, ಎರಳೆ, ಸಾರಗ, ಬರ್ಕವು,
ಹಾವು, ಉಡ, ಕಣೆಹಂದಿ, ಚಿಪ್ಪಿನ ಹಂದಿ, ಮುಂಗುಸಿ, ಕುರ್ಕವು!

ಬರಿಯ ಹೆಸರುಗಳಲ್ಲ, ನನಗಿವು ಸಾಹಸಂಗಳ ಕಿಡಿಗಳು;
ಕಂಡು ಕೇಳಿದ ಕಥೆಯನೊಡಲೊಳಗಾಂತ ಮಂತ್ರದ ನುಡಿಗಳು!
ಮಗುವುತನದಿಂದಿಂದುವರೆಗಾ ಒಂದು ಹೆಸರಿನ ಚೀಲಕೆ
ಸೇರಿ ಅನುಭವ ನೂರು ಕಲ್ಪನೆ, ಬಡ್ಡಿ ಮೀರಿದೆ ಸಾಲಕೆ!

ಅಲ್ಲಿ ಮೊರೆಮೊರೆದುರುಳಿ ಬರುತಿಹ ತೊರೆಯ ತೀರದ ಹಸುರಲಿ
ಮೊಲವು ಗರುಕೆಯ ಮೇದು ಕುಳಿತಿರೆ, ಬಳಿಯ ದಡದೆಡೆ ಕೆಸರಲಿ
ಒಂಟಿಕಾಲಲಿ ನಿಂತು ಕುಕ್ಕನ ಹಕ್ಕಿ ಬೆಳ್ಳಗೆ ಮೆರೆವುದು:
ಆಹ ನೆನೆದರೆ ಸಾಕು, ನನ್ನೆದೆಯುಕ್ಕಿ ಮೈಯನೆ ಮರೆವುದು!

ಅಲ್ಲಿ ನಡುಹಗಲಲ್ಲಿ, ಮೌನದಿ ನಿದ್ದೆಗೈದಿರೆ ಬನಗಳು,
ಬಿಸಿಲ ಬೇಗೆಗೆ ಮನೆಯ ಸೇರಿರೆ ಗೆಯ್ದು ದಣಿದಿಹ ಜನಗಳು,
ತಳಿತ ಹೊಂಗೆಯ ಕರಿಯ ನೆಳಲಲಿ ಮಲಗಿ ಜೋಂಪಿಸೆ ದನಗಳು,
ಕೊಳಲನೂದುವನಾಹ ಗೋಪನು ನಲಿಯಲಾ ಮೃಗ ಮನಗಳೂ!

ಗಗನದೆತ್ತರಕೆತ್ತಿ ಕಬ್ಬಿಗನೆದೆಯನೆದ್ದಿವೆ ಗಿರಿಗಳು;
ಗಗನದಾಚೆಗೆ ಬೀಸಿ ಮನವನು ಬಹವು ಮೋಡದ ಕರಿಗಳು;
ತೇಲಿ ಮುಂದಕೆ ನುಗ್ಗಿ, ತಿರುತಿರುಗುಬ್ಬಿ ಭೀಮಾಕಾರದಿ
ತಿರೆಗೆ ಬಾನಿಗೆ ನಡುವೆ ಬಂದಪವಡಗೆ ನೀಲದ ನೀರಧಿ!

ಅಲ್ಲಿ ಮಂದಾನಿಲನು ತೆಕ್ಕನೆಯಹನು ಜಂಝಾವಾತನು;
ಧ್ಯಾನ ಮೌನದ ವಿಪಿನ ತಾನಹುದಬ್ಬರಿಪ ಪೆರ್ಭೂತನು.
ಲಲಿತ ರುದ್ರಗಳಲ್ಲಿ ಯಮಳರು: ಹೂವು ಮುಳ್ಳಿಗೆ ಆರತಿ;
ಮುಗಿಲನಿರಿಯುವ ಶಿಖರಕಾಳದ ಕಣಿವೆ ತಕ್ಕೆಯ ಪೆಂಡಿತಿ!

ಅಲ್ಲಿ ಕಾನನ ಮಧ್ಯೆ ತುಂಗೆಯು ಮುತ್ತನಿಡುವಳು ಕಣ್ಣಿಗೆ;
ದಡದೊಳಿಡಿದಿಹ ಬಿದಿರು ಮೆಳೆಗಳ ಹಸುರು ಚಾಮರ ತಣ್ಣಗೆ
ಬೀಸುಗಾಳಿಗೆ ಒಲೆಯೆ, ಭದ್ರೆಯು ತುಂಬಿ ಹರಿವಳು ನುಣ್ಣಗೆ:
ಮಲೆಯ ಬಿತ್ತರದೆದುರು ಹೊನಲುಗಳೆನಿತು ನೋಡದೊ ಸಣ್ಣಗೆ!

ಚೈತ್ರ ಸಂಧ್ಯೆಯ ಮೊಗಕೆ ಮೆತ್ತುತೆ ಮುಗಿಲಕೂದಲ ಮಸಿಯನು,
ಮುಡಿಗೆದರಿ, ಸಿಡಿಲೊದರಿ, ಝಳಪಿಸಿ ಮಿಂಚಿನುಜ್ವಲ ಅಸಿಯನು
ಬಾನ ಕರೆಯಿಂ ನುಗ್ಗಿಬಹ ಮುಂಗಾರ ಕರಿ ರಕ್ಕಸಿಯನು
ಕಾಣುತುರ್ವರೆ ನವಿರುನಿಮಿರುವಳೆಳೆಯ ಹಸುರಿನ ಸಸಿಯನು!

ಮೊದಲು ಹದಮಳೆ ತಿರೆಯ ತೊಯ್ಯಲು ಮಿಂದ ಕಾಫಿಯ ತೋಟವು
ಇಂದ್ರನಂದನದಮರ ವೃಂದಕು ಬೆರಗನೀಯುವ ನೋಟವು!
ಬೆಟ್ಟದೋರೆಯು, ಕಣಿವೆ, ತಪ್ಪಲು, ಗಿರಿಯ ನೆತ್ತಿಯೊಳೆಲ್ಲಿಯೂ
ಕಣ್ಣು ಹೋಹೆಡೆಯಲ್ಲಿ ಕಾಫಿಯ ಹೂವು: ಬೆಣ್ಣೆಯು, ಬೆಳ್ಳಿಯು!

ಗಗನದಭ್ರತೆ ಜಗದ ಶುಭ್ರತೆಯೆಲ್ಲ ಸುಂದರ ಶಾಪದಿ
ಕಾಫಿಕಾನಿಗೆ ಬಂದು ನಿಂದಿವೆ ಪುಷ್ಪಪುಣ್ಯದ ರೂಪದಿ!
ಕಣ್ಣು ತಣಿವುದು; ಮನವು ಮಣಿವುದು: ಹಾಲುಹೂವಿನ ಹೊಳೆಯಲಿ
ಅಮೃತಸ್ನಾನವೊ ಮೇಣು ಪಾನವೊ ಬಿಳಿಯ ಮುತ್ತಿನ ಮಳೆಯಲಿ!

ಹಾತೊರೆಯುತಿದೆ; ಕಾತರಿಸುತಿದೆ; ಮನಕೆ ಮನೆಗಿರ ಹಿಡಿದಿದೆ!
ನೆನಹಿನಲರಿನ ಬಂಡನಾತ್ಮದ ಭೃಂಗ ಹೊಡೆನಲಿ ಕುಡಿದಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಬಿಳಿಯ ತಿಂಗಳ ಸಿರಿ ಬನಂಗಳ ಮಲೆಯ ಮಂಗಳ ನಾಡಿಗೆ!

ಮೂಡು ಬಾನಿನ ಮೊಗದಿ ಮಲರಲು ಉಷೆಯ ನಸುನಗೆ ತಾವರೆ,
ತುಂಬಿ ತುಳುಕೆ ದಿಗಂತದತ್ತಣಿನರುಣ ಕಾಂತಿಯ ಹೊಂದೊರೆ,
ಕುಸುಮಧೂಳಿಯ ಕೆದರ್ವ ಗಾಳಿಯು ಬೀಸಿ ಪರಿದಿರೆ ಕಳ್ತಲೆ,
ಏರುವೆನು ನಾ ನವಿಲುಕಲ್ಲಿಗೆ ನೇಸರುದಯವನಿದಿರ್ಗೊಳೆ!

ಸಂಜೆ ಕುಂಕುಮರಂಗಿನೋಕುಳಿಯೆರಚುತಿಳಿತರೆ ಬನದಲಿ,
ಗೂಡಿಗೋಡುವ ಹಕ್ಕಿಯಿಂಚರ ನೆಯ್ಯೆ ನಾಕವ ಮನದಲಿ,
ಹಾದಿಯಲಿ ಹೊಂಧೂಳಿಯೆಬ್ಬಿಸಿ ಗೋಗಳೈತರೆ ಹಟ್ಟಿಗೆ,
ಕಾನನದ ಕವಿಶೈಲಕೇರುವೆ, ಮನೆಯ ಮೇಲಕೆ ನೆಟ್ಟಗೆ!

ಗಾಳಿ ಸುಯ್ಯನೆ ಬೀಸಿ ಮರಗಳ ತೂಗುತುಯ್ಯಲೆಯಾಡಲು,
ಶೈಲಶೈಲಿಯ ಮೈಲಿಮೈಲಿಯ ದೂರ ದಿನಮಣಿ ಬಾಡಲು,
ಬೇಟೆಗಾರನನಡವಿಯಿಂ ಮನೆಗೆಳೆವ ಬೆಳ್ಳಿಯು ಮೂಡಲು
ಸಂಜೆಗಿರಿಯಾ ಶೃಂಗಕೇರುವೆ ದಿವ್ಯದೃಶ್ಯವ ನೋಡಲು!

ಎಲ್ಲಿ ತಿಂಗಳು ಕಾಡುಮಲೆಗಳ ಮೇಲೆ ಹಾಲ್ಮಳೆ ಸುರಿವುದೋ,
ಕಿವಿಯ ಜಿಹ್ವೆಗೆ ಎಲ್ಲಿ ಜೊನ್ನುಣಿ ತೇನೆ ಜೇನ್ಮಳೆ ಕರೆವುದೋ,
ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ,
ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ,

ಎಲ್ಲಿ ಹಸುರನು ಚಿಮ್ಮಿ ಕಣ್ಣಿಗೆ ಪೈರುಪಚ್ಚೆಯು ಬೆಳೆವುದೋ,
ಎಲ್ಲಿ ಗದ್ದೆಯ ಕೋಗು ಪವನನ ಹತಿಗೆ ತೆರೆತೆರೆಯೊಲೆವುದೋ,
ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ,
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ,

ಅಲ್ಲಿಗೈದುವೆನಲ್ಲಿಗೈದುವೆನಿಲ್ಲಿ ಬೇಸರವಾಗಿದೆ:
ಕಾಡುಮಲೆಗಳನಲೆವ ಹುಚ್ಚಿನ ಕಿಚ್ಚು ಹೃದಯದಿ ರೇಗಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

ಅಲ್ಲಿ ಭಾವದ ಬೆಂಕಿಹಕ್ಕಿಯ ಮಿಂಚುರೆಕ್ಕೆಯನೇರುವೆ:
ಧರಣಿ, ದಿನಮಣಿ, ತಾರೆ, ನೀಹಾರಿಕೆಯ ನೇಮಿಯ ಮೀರುವೆ!
ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಹಾರುವೆ:
ಕಾವ್ಯಕನ್ಯಾ ಶ್ರಾವ್ಯಕಂಠದೊಳಾತ್ಮಭೂತಿಯ ಸಾರುವೆ!

ನಗರ ನಾಗರಿಕತೆಯ ಗಲಿಬಿಲಿ ಅಲ್ಲಿ ಸೋಂಕದು, ಸುಳಿಯದು.
ದೇಶದೇಶದ ವೈರಯುದ್ಧದ ಸುದ್ದಿಯೊಂದೂ ತಿಳಿಯದು.
‘ತಿಳಿಯದಿರುವುದೆ ತಿಳಿವು’ ಎಂಬುವ ನನ್ನಿ ಆಯೆಡೆ ತಿಳಿವುದು.
‘ತಿಳಿಯೆ ನೋವಿರೆ, ತಿಳಿಯದಿರುವುದೆ ಜಾಣ್ಮೆ’ ಎಂಬರಿವುಳಿವುದು!

ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:
ಮಲೆಯನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ:
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

                                                         - ಕುವೆಂಪು
                                   ('ಪಕ್ಷಿಕಾಶಿ' ಕವನ ಸಂಕಲನದಿಂದ)

ನನ್ನ ಹಾಡು



ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.

              - ದ ರಾ ಬೇಂದ್ರೆ

ಬಾ ಫಾಲ್ಗುಣ ರವಿ ದರ್ಶನಕೆ!


ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ;
ಬಾ ಫಾಲ್ಗುಣ ರವಿ ದರ್ಶನಕೆ!

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು;
ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು;
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು.
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು!

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ್‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ!

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ:
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ;
ಸಕಲಾರಾಧನ ಸಾಧನಬೋಧನದನುಭವರಸ ತಾನಹುದಲ್ಲಿ!
                                       
                                                 - ಕುವೆಂಪು
                             ('ಪಕ್ಷಿಕಾಶಿ' ಕವನ ಸಂಕಲನದಿಂದ)