ಬುದ್ಧ



ಬುದ್ಧ, ಬುದ್ಧ -
ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ;
ಮಡದಿ ಮಗು ಮನೆ - ಮಾರು ರಾಜ್ಯ - ಗೀಜ್ಯ
ಹೊತ್ತಿರುವ ಉರಿಯಲಿ ಆಯಿತಾಜ್ಯ
ಹಿಂದೆ ಬಿದ್ದವು ಎಲ್ಲೋ ಕುದುರೆ  ಕಾಲಾಳು
ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು
ಹೊರಟ ಹೊರಟೇ ಹೊರಟ, ಹೊರಟನೆತ್ತೋ
ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ !

ಕಾಮ - ಕ್ರೋಧವ ದಾಟಿ, ಮದ - ಮತ್ಸರವ ತುಳಿದು
ಮೋಹ - ಲಾಭವ ಮೆಟ್ಟಿ ಅಡಿ ಕಿತ್ತಿ ಇಟ್ಟ,
ಇದೊ ತಗ್ಗು, ಅದೊ ಗುಡ್ಡ, ಆಗೋ ಮಲೆಯ ಬೆಟ್ಟ
ನೆಲ ತೆಳಗೆ ಬಿಟ್ಟ.

ಏರಿದೆರಿದನೇರಿ ಗಾಳಿಗುದುರೆ ಸವಾರಿ
ಚಂದ್ರಕಿರಣವ ಮೀರಿ ಸೂರ್ಯ ಸೇರಿ
ಬೆಳಕನ್ನೆ ಹಿಂದೊಗೆದು ತಮದ ಬಸಿರನೆ ಬಗೆದು
ಅಸ್ಪರ್ಶ ಅವಕಾಶದಲ್ಲಿ ಇದ್ದ.
ಬುದ್ಧ-ಬುದ್ಧ-ಬುದ್ಧ
ಶಬ್ದ-ನಾದ-ದ್ವನಿಯ ಸದ್ದ ಮೀರಿದ್ದ.
ಇಲ್ಲ ಎಂಬುವ ಕೊನೆಗೆ ಆತ್ಮ ಶುದ್ದ
ಇದ್ದರೆನಿಲದಿದ್ದರೇನೆನಲು ಗೆದ್ದ.

ಅಲ್ಲಿಂದ ಇಲ್ಲಿವರೆ ಹೊರಳಿ ನೋಡಿ
ಇದ್ದುದಿದ್ದಂತಿತ್ತು ಜನನ-ಮರಣದ ಜೋಡಿ
ಗೆದ್ದುದೇನೆಂದೆನುತ ಮರಳಿ ಜಿಗಿದ
ಭೂತಜಾತದ ಎದೆಯ ಸೀಳಿ ಸಿಗಿದ
ಅದೇ ತನ್ನ ಮನೆಯಂದು ಸಿದ್ಧ ಬಗೆದ.

ಬುದ್ಧನೆಂಬುವ ಒಬ್ಬ ಎಂದೊ ಇದ್ದ
ಎನುವಂತೆ ಇಂದಿಗೂ ಇಲ್ಲೇ ಇಲ್ಲ
ಬುದ್ಧ ಹುಟ್ಟಿದ ಮೇಲೆ ಹಳೆ ಜಗವು ಸತ್ತು
ಇದ್ದು ಇಲ್ಲದ ಹಾಗೆ, ಹಾಗೆ ಇತ್ತು.
ಬುದ್ಧ ಸತ್ತನು ಎಂದು ಯಾರೆಂದರೂ
ಬುದ್ಧನ ಜಯಂತಿಗಿದೆ ಜಯವೆಂದಿಗೂ
ಬುದ್ಧನ ಸಮಾಧಿಯದು ಮಾನವನ ಹೃದಯ
ಅದುವೆ ಕಾಯುತ್ತಲಿದೆ ಕಲ್ಕಿ ಉದಯ.

                                         - ದ ರಾ ಬೇಂದ್ರೆ
 ('ಗಂಗಾವತರಣ' ಕವನ ಸಂಕಲನದಿಂದ)

1 ಕಾಮೆಂಟ್‌:

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....