ದೇಶಭಕ್ತನೊರ್ವನಿಗೆ


ಶ್ರೀಕೃಷ್ಣನೆಂದನಂದರ್ಜುನಗೆ “ಹೇ ಪಾರ್ಥ,
ಕೀಳಾದೊಡಂ ತನ್ನ ಧರ್ಮದೊಳಳಿವೆ ಲೇಸು;
ಮೇಲಾಗಿ ತೋರ್ದಡಂ ಪರಧರ್ಮವದು ಹೇಸು,
ಭೀಕರಮಜಯಕರಂ; ತನಗನರ್ಥಂ, ವ್ಯರ್ಥ
ಅನ್ಯರಿಗೆ.” ಕಬ್ಬಿಣದ ಕರ್ಮ ಕಬ್ಬಿಣಕೆ ಹಿತ.
ಗಣಿಯಿಂದಮಲ್ತು ಗುಣದಿಂದೆ ಲೋಹದ ಕರ್ಮ
ನಿರ್ಣಯಂ. ಗುಣವರಿತ ನಡೆಯೆ ಯೋಗದ ಮರ್ಮ.
ಹೊರಗೊಳಗನಾಳ್ವ ಆ ಕಟ್ಟಳೆಯೆ ದಿವ್ಯ ಋತ.
ದೇಶಭಕ್ತನೆ, ನಿನ್ನ ಕರ್ಮಕೆ ಸುಲಭ ಕೀರ್ತಿ
ದೊರೆಯುತಿದೆ; ಶೀಘ್ರ ಫಲವೂ ಲಭಿಸುತಿದೆ ಜನಕೆ;
ನೀನಿಂದು ಲೋಕದಾರಾಧನೆಯ ಶ್ರೀಮೂರ್ತಿ:
ಕರುಬು ನಾಣ್ಗಳ ಸೋಂಕು ಸುಳಿಯದೈ ಕವಿಮನಕೆ!
ಸೌಂದರ್ಯಸೃಷ್ಟಿಯೆ ಕವಿಗೆ ಪೂಜೆ, ಕರ್ತವ್ಯ,
ಜನಸೇವೆ, ಸಾಧನೆ: ರಸವೆ ಪರಮಗಂತವ್ಯ!

                             - ಕುವೆಂಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....